ದೇವನಹಳ್ಳಿ : ಪ್ರಿಯಕರನ ಮಾತಿಗೆ ಮರುಳಾಗಿ ಗಂಡನ ಮನೆ ಬಿಟ್ಟು ಪರಾರಿಯಾಗಿದ್ದ ಗೃಹಿಣಿ 100 ಅಡಿ ಆಳದ ಪಾಳು ಬಾವಿಯಲ್ಲಿ 4 ರಾತ್ರಿ ಮತ್ತು 4 ಹಗಲುಗಳನ್ನು ಕಳೆದಿದ್ದಾಳೆ! ನಾಪತ್ತೆಯಾದವಳ ಪತ್ತೆಗಾಗಿ ನಾಲ್ಕು ದಿನ ಹುಡುಕಾಡಿದ ಪೊಲೀಸರಿಗೆ ಪಾಳುಬಾವಿಯಲ್ಲಿ ಬಿದ್ದು ನರಳಾಡುತ್ತಿದ್ದ ಗೃಹಿಣಿ ಸಿಕ್ಕಿದ್ದಾಳೆ. ಆಕೆಯನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದ್ದಾರೆ.
ಸಾವು ಬದುಕಿನ ನಡುವೆ ಹೋರಾಡುತ್ತಿರುವ ಆಕೆಯನ್ನ ಪ್ರಿಯಕರನೇ ಬಾವಿಗೆ ತಳ್ಳಿ, ಕೊಲ್ಲುವ ಯತ್ನ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಎ. ರಂಗನಾಥಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಲೂರು ತಾಲೂಕಿನ ಸೊಣ್ಣಹಳ್ಳಿ ಗ್ರಾಮದ 23 ವರ್ಷದ ಗೃಹಿಣಿ ಅಮೃತಾ ಎಂಬಾಕೆಯನ್ನು ಪಾಳು ಬಾವಿಯಿಂದ ರಕ್ಷಣೆ ಮಾಡಲಾಗಿದೆ.
ಅಮೃತಾಳಿಗೆ ಸೊಣ್ಣಹಳ್ಳಿಯ ಅಶೋಕ್ ಎಂಬ ಯುವಕನೊಂದಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಇವರಿಗೆ ಒಂದು ಗಂಡು ಮಗು ಸಹ ಇದೆ. ಇವರ ದಾಂಪತ್ಯ ಜೀವನದ ಮಧ್ಯೆ ಬಂದ ಪ್ರಿಯಕರ ಅಮೃತಾಳನ್ನು ಪಾಳುಬಾವಿಯಲ್ಲಿ ನರಳುವಂತೆ ಮಾಡಿದ್ದಾನೆ. ಕಳೆದ ಶನಿವಾರ ಎಂದಿನಂತೆ ಗಂಡ ಅಶೋಕ್ ಕೆಲಸಕ್ಕೆ ತೆರಳಿದ್ದಾನೆ. ಅತ್ತೆ- ಮಾವ ಹೊಲಕ್ಕೆ ಹೋಗಿದ್ದಾರೆ. ಆಗ ಮಗುವನ್ನು ಪಕ್ಕದ ಮನೆಯವರಿಗೆ ಕೊಟ್ಟು ಮಾಲೂರಿಗೆ ಹೋಗುವುದ್ದಾಗಿ ಹೇಳಿದ ಅಮೃತಾ ಮಾಲೂರಿನ ಗಂಡನ ಮನೆ ಸೊಣ್ಣಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದಳು. ಅಂದು ನಾಪತ್ತೆಯಾಗಿದ್ದ ಅಮೃತಾಳನ್ನು ಗಂಡನ ಮನೆ ಕಡೆಯವರು ಹುಡುಕಾಟ ನಡೆಸಿದ್ದರೂ ಆಕೆಯ ಪತ್ತೆಯಾಗಿರಲಿಲ್ಲ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಅಸ್ವಸ್ಥವಾಗಿರುವ ಅಮೃತಾಳನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಬಾವಿಗೆ ತಳ್ಳಿದ್ದ ಆದರ್ಶನ ಮಾಹಿತಿ ಪಡೆದಿರುವ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣವನ್ನ ದಾಖಲಿಸಿಕೊಂಡಿರುವ ವಿಜಯಪುರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.