Sunday, June 29, 2025
spot_imgspot_img
spot_imgspot_img

ಏಸುವಿನ ಭೇಟಿಗಾಗಿ ಉಪವಾಸ; ನಕಲಿ ಕ್ರೈಸ್ತ ಬೋಧಕನ ಮಾತು ಕೇಳಿ ಸುಮಾರು 400ಕ್ಕೂ ಹೆಚ್ಚು ಮಂದಿ ಸಾವು, 610 ಜನ ನಾಪತ್ತೆ

- Advertisement -
- Advertisement -

ಉಪವಾಸ ಮಾಡಿದರೆ ಏಸು ಕ್ರಿಸ್ತನನ್ನು ಭೇಟಿಯಾಗಬಹುದು ಎಂಬ ನಕಲಿ ಧರ್ಮ ಪ್ರಚಾರಕನ ಮಾತು ಕೇಳಿ ಸುಮಾರು 403ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 12 ಜನರ ಶವ ಕೀನ್ಯಾದ ಶಕಹೊಲ ಅರಣ್ಯದಲ್ಲಿ ಪತ್ತೆಯಾಗಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ಗುಡ್ ನ್ಯೂಸ್ ಇಂಟರ್‌ನ್ಯಾಷನಲ್ ಚರ್ಚ್‌ನ ಸಂಸ್ಥಾಪಕ, ಬೋಧಕ ಪೌಲ್ ಮೆಕೆಂಝಿ ಅನುಯಾಯಿಗಳಾಗಿದ್ದರು.

ಪೌಲ್‌ ಮೆಕೆಂಝಿ ಎಂಬ ನಕಲಿ ಧರ್ಮ ಪ್ರಚಾರಕನೊಬ್ಬ, 2003ರಲ್ಲಿ ಗುಡ್‌ ನ್ಯೂಸ್‌ ಇಂಟರ್‌ನ್ಯಾಷನಲ್‌ ಎಂಬ ಚರ್ಚ್‌ ಸ್ಥಾಪಿಸಿ ಅದರಲ್ಲಿ ಪಾದ್ರಿಯಾಗಿದ್ದ. 2017ರಲ್ಲಿ, ‘ಮಕ್ಕಳಿಗೆ ಶಾಲೆಗೆ ಹೋಗಬೇಡಿ. ಬೈಬಲ್‌ ಶಿಕ್ಷಣವನ್ನು ಮಾನ್ಯ ಮಾಡುವುದಿಲ್ಲ’ ಎಂದು ಪ್ರಚಾರ ಮಾಡಿದ್ದ. ಅದಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಜನರಿಗೆ ಏಸುಕ್ರಿಸ್ತನ ಭೇಟಿ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿ ಜನರನ್ನು ಅರಣ್ಯಕ್ಕೆ ಕರೆಸಿ ಅಲ್ಲಿ ಉಪವಾಸ ಮಾಡಿಸುತ್ತಿದ್ದ. ಇದನ್ನು ನಂಬಿದ ನೂರಾರು ಜನರು ಉಪವಾಸ ಮಾಡುತ್ತಿದ್ದರು. ಅವರು ಉಪವಾಸ ಮುರಿಯದಂತೆ ನೋಡಿಕೊಳ್ಳಲು ತನ್ನ ಶಿಷ್ಯರನ್ನು ನೇಮಿಸಿದ್ದ.

ಸದ್ಯ ಉಪವಾಸ ಮಾಡಲು ಸಲಹೆ ನೀಡಿದ ಆರೋಪಿ ಪೌಲ್ ಮೆಕೆಂಝಿ ಮತ್ತು ಇನ್ನಿತರ 36 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾದ 610ಕ್ಕೂ ಹೆಚ್ಚು ಜನರು ಅರಣ್ಯದ ಸುತ್ತಲಿನ ಗ್ರಾಮದವರಾಗಿದ್ದಾರೆ. ಇದುವರೆಗೆ ಹೊರತೆಗೆದ 403 ಮೃತದೇಹಗಳ ಪೈಕಿ 253 ದೇಹಗಳಲ್ಲಿ ಡಿಎನ್‌ಎ ಹೊಂದಾಣಿಕೆಯನ್ನು ನಡೆಸಲಾಗಿದೆ. ಮೃತಪಟ್ಟವರ ಶವಗಳನ್ನು ಅಧಿಕೃತವಾಗಿ ಪರೀಕ್ಷೆ ನಡೆಸಿದಾಗ ಹೆಚ್ಚಿನವರು, ಅಪೌಷ್ಟಿಕತೆ, ಉಸಿರುಗಟ್ಟುವಿಕೆ ಮುಂತಾದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಶೋಧನೆಗಳನ್ನು ಮುಖ್ಯ ಸರ್ಕಾರಿ ರೋಗಶಾಸ್ತ್ರಜ್ಞ ಜೋಹಾನ್ಸೆನ್ ಓಡುರ್ ದೃಢಪಡಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ಹಸಿವಿನಿಂದ ಸಾವನ್ನಪ್ಪಿದ್ದಾರೆ.

ಕಳೆದ ಏಪ್ರಿಲ್‌ ತಿಂಗಳಿನಲ್ಲಿ ಹೀಗೆ ಸಾವಿಗೀಡಾದವರ ಸಾಮೂಹಿಕ ಶವಗಳು ಹಾಗೂ ಸಾಯುವ ಸ್ಥಿತಿಯಲ್ಲಿದ್ದ ಜನರು ಪತ್ತೆಯಾದ ಬಳಿಕ ಪೌಲ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಳಿಕ ಆತ ಅರಣ್ಯದಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ಸ್ಥಳದಲ್ಲಿ 300ಕ್ಕೂ ಹೆಚ್ಚು ಶವಗಳು ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ಸುತ್ತಮುತ್ತಲ ಪ್ರದೇಶಗಳಲ್ಲೂ ಶವಗಳ ಪತ್ತೆಗೆ ಆದೇಶಿಸಿತ್ತು. ಅದರಂತೆ ನಡೆದ ಹುಡುಕಾಟದಲ್ಲಿ ಇದೀಗ ಮತ್ತೆ 12 ಶವಗಳು ಸಿಕ್ಕಿವೆ. ಇದರೊಂದಿಗೆ ಪೌಲ್‌ ಮಾತು ನಂಬಿ ಮೃತಪಟ್ಟವರ ಸಂಖ್ಯೆ 403ಕ್ಕೆ ತಲುಪಿದೆ.

- Advertisement -

Related news

error: Content is protected !!