ಹೈದರಾಬಾದ್: ಮದುವೆ ಮಾಡುವಂತೆ ಒತ್ತಾಯಿಸಿದ ಮಗನನ್ನೇ ತಂದೆ ಕೊಡಲಿಯಿಂದ ಕೊಚ್ಚಿ ಕೊಂದ ಘಟನೆ ಹೈದರಾಬಾದ್ನ ರಂಗರೆಡ್ಡಿ ಜಿಲ್ಲೆಯ ಶಾದ್ನಗರ ಕ್ಷೇತ್ರದ ನಂದಿಗಮ ಮಂಡಲದಲ್ಲಿ ನಡೆದಿದೆ.ತಂದೆಯ ಕೈಯಿಂದ ಕೊಲೆಯಾದ ಮಗನನ್ನು ನರೇಶ್ ಎಂದು ಗುರುತಿಸಲಾಗಿದೆ. ಎಲ್ಲಯ್ಯ, ಮಗನನ್ನು ಕೊಲೆ ಮಾಡಿರುವ ತಂದೆ. ಮದುವೆ ಮಾಡುವಂತೆ ಮಗ ಪ್ರತಿನಿತ್ಯ ಹಿಂಸೆ ಮಾಡುತ್ತಾನೆ ಎಂದು ಎಲ್ಲಯ್ಯ ತನ್ನ ಮಗನನ್ನು ಕೊಂದಿದ್ದಾನೆ.
ನರೇಶ್ ತನ್ನ ಮದುವೆ ಮಾಡುವಂತೆ ತನ್ನ ತಂದೆಗೆ ಒತ್ತಾಯ ಮಾಡುತ್ತಿದ್ದನು. ತಂದೆ-ಮಗನಿಗೆ ಈ ವಿಚಾರವಾಗಿ ಪ್ರತಿನಿತ್ಯ ಜಗಳವಾಗುತ್ತಿತ್ತು. ಶನಿವಾರ ಸಂಜೆ ಎಲ್ಲಯ್ಯ ಕುಡಿದು ಮನೆಗೆ ಬಂದಿದ್ದಾನೆ. ಈ ವೇಳೆ ತಂದೆ-ಮಗನ ಮಧ್ಯೆ ಇದೇ ವಿಚಾರವಾಗಿ ಗಲಾಟೆಯಾಗಿದೆ. ಸಿಟ್ಟನಿಂದ ತಂದೆ ಹತ್ತಿರದಲ್ಲಿದ್ದ ಕೊಡಲಿಯನ್ನು ತೆಗೆದುಕೊಂಡು ಬಂದು ಮಗನಿಗೆ ಬಲವಾಗಿ ಹೊಡೆದಿದ್ದಾನೆ. ಈ ವೇಳೆ ನರೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ತಕ್ಷಣ ನರೇಸ್ನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ನರೇಶ್ ತಾಯಿ ಪತಿಯ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.