ಸ್ಯಾಂಡಲ್ವುಡ್ ನಟ ದರ್ಶನ್ ವಿರುದ್ಧ ಆರ್ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿದೆ.
ಅ.28ರಂದು ಆರ್ ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನದ ಜಾಗೃತಿ ಕಾರ್ಯಕ್ರಮದಲ್ಲಿ ಅಮಿತಾ ಜಿಂದಾಲ್ ಪಾಲ್ಗೊಂಡಿದ್ದರು. ಆಸ್ಪತ್ರೆ ಸಮೀಪದಲ್ಲಿಯೇ ಇರುವ ನಟ ದರ್ಶನ್ ಅವರ ನಿವಾಸದ ಪಕ್ಕದ ಜಾಗದಲ್ಲಿ ಅಮಿತಾ ಅವರು ತಮ್ಮ ಕಾರು ಪಾರ್ಕ್ ಮಾಡಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ಬಂದ ಅಮಿತಾ ಕಾರು ತೆಗೆಯಲು ಹೋದಾಗ ಖಾಲಿ ಜಾಗದಲ್ಲಿ ಕಟ್ಟಿ ಹಾಕಿರುವ ಎರಡು ನಾಯಿಗಳ ಜತೆಗೆ ಕಟ್ಟಿ ಹಾಕದ ಮತ್ತೊಂದು ನಾಯಿಯನ್ನು ನೋಡಿ ಹೆದರಿದ್ದರು.
“ಕಾರು ತೆಗೆಯುವ ಸಲುವಾಗಿ ನಾಯಿಗಳನ್ನು ಬೇರೆಡೆ ಕರೆದೊಯ್ಯುವಂತೆ ಅಲ್ಲಿದ್ದ ವ್ಯಕ್ತಿಗೆ ತಿಳಿಸಿದ್ದೆ. ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ನಾಯಿಗಳು ದಾಳಿ ನಡೆಸಿದವು ಎಂದು ಅಮಿತಾ ಜಿಂದಾಲ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಾಯಿಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಸಹ ನಿಯಂತ್ರಿಸದೇ ಕೆಲಸಗಾರ ಸುಮ್ಮನಿದ್ದನೆಂದು ಆರೋಪಿಸಿರುವ ಅಮಿತಾ ಅವರು, ನಾಯಿಗಳನ್ನ ನೋಡಿಕೊಳ್ಳುತ್ತಿದ್ದ ಕೆಲಸಗಾರ ಹಾಗೂ ಮಾಲೀಕ ದರ್ಶನ್ ವಿರುದ್ಧ ದೂರು ನೀಡಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.