ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಓರ್ವ ಗಾಯಗೊಂಡ ಘಟನೆ ಬೆಂಗಳೂರಿನ ಪೈಪ್ಲೈನ್ ರಸ್ತೆಯ ಚೋಳರಪಾಳ್ಯದಲ್ಲಿ ನಡೆದಿದೆ.
ಘಟನೆಯಲ್ಲಿ ರವಿಕುಮಾರ್ ಎಂಬವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಳೆದ ಐದು ವರ್ಷಗಳಿಂದ ಚೋಳರಪಾಳ್ಯದ ಮನೆಗಳಿರುವ ಪ್ರದೇಶದಲ್ಲಿ ಗುಡಿಕೈಗಾರಿಕೆ ರೀತಿ ಮನೆಯಲ್ಲೇ ಅಗರಬತ್ತಿ ಕಾರ್ಖಾನೆ ನಡೆಲಾಗುತ್ತಿದೆ. ಮನೆಯಲ್ಲಿ ಕಾರ್ಖಾನೆ ನಡೆಸುತ್ತಿರುವುದರಿಂದಾಗಿ ಗ್ರೌಂಡ್ ಫ್ಲೋರ್ನಲ್ಲಿ ಅಗರಬತ್ತಿ ತಯಾರಿಕೆಗೆ ಬೇಕಾಗಿದ್ದ ಲಿಕ್ವಿಡ್ ರಾಸಾಯನಿಕಗಳನ್ನು ಶೇಕರಿಸಿಡಲಾಗಿತ್ತು.
ಆದರೆ, ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದಾಗಿ ಲಿಕ್ವಿಡ್ ರಾಸಾಯನಿಕಗಳಿದ್ದ ಕ್ಯಾನ್ಗಳು ಸ್ಫೋಟಗೊಂಡು ರಾಸಾಯನಿಕ ರಸ್ತೆಗೆ ಹರಿದಿದೆ. ಪರಿಣಾಮ ರಸ್ತೆಗೂ ಬೆಂಕಿ ಆವರಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಎಂಟು ಬೈಕ್ಗಳು ಸುಟ್ಟು ಭಸ್ಮವಾಗಿವೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಮೂರು ವಾಹನಗಳೊಂದಿಗೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಸಂಭವಿಸುತ್ತಿದ್ದ ಹೆಚ್ಚಿನದ ಅನಾಹುತವನ್ನು ತಪ್ಪಿಸಿದ್ದಾರೆ. ಈ ಕುರಿತು ಘಟನಾ ಸ್ಥಳಕ್ಕೆ ವಿಜಯನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.