ನವದೆಹಲಿ: ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸರ್ಕಾರ ಅಭಯಹಸ್ತ ಚಾಚುತ್ತಿದೆ. ಭಾರತದ ಅರ್ಥವ್ಯವಸ್ಥೆಯಲ್ಲಿ ಕೃಷಿಯೇ ಮಾತೃ ಕ್ಷೇತ್ರವಾಗಿದೆ. ಇದಕ್ಕೆ ಮಾರಕವಾಗುವಂಥ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಎಫ್ಐಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ನಿನ್ನೆ ಮಾತನಾಡಿದ ರಾಜನಾಥ್ ಸಿಂಗ್, ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನ ಸಮರ್ಥಿಸಿಕೊಂಡರು. ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡೇ ಈ ಕಾಯ್ದೆಗಳನ್ನ ರೂಪಿಸಲಾಗಿದೆ ಎಂದ ಅವರು, ಈ ಸಂಬಂಧ ಸಂವಾದ, ಚರ್ಚೆಗಳಿಗೆ ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿದರು.
“ಇತ್ತೀಚಿನ ಸುಧಾರಣಾ ಕ್ರಮಗಳನ್ನ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡೇ ತೆಗೆದುಕೊಳ್ಳಲಾಗಿದೆ. ಮತ್ತೆ ಹಳೆಯ ವ್ಯವಸ್ಥೆಗೆ ಮರಳುವುದು ಸಾಧ್ಯವೇ ಇಲ್ಲ. ಆದರೂ ಕೂಡ ನಮ್ಮ ರೈತರ ಅಭಿಪ್ರಾಯಗಳನ್ನ ಕೇಳಲು ನಾವು ಸದಾ ಸಿದ್ಧರಿದ್ದೇವೆ. ಕಾಯ್ದೆಗಳಿಂದ ಆಗುವ ಪ್ರಯೋಜನಗಳನ್ನ ತಿಳಿಸಿ ಅವರ ಆತಂಕ ದೂರ ಮಾಡುವ ಪ್ರಯತ್ನ ಮಾಡುತ್ತೇವೆ” ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಕೊರೋನಾ ಸಂಕಷ್ಟ ಎದುರಾದಾಗ ಮೈಕೊಡವಿ ನಿಂತದ್ದು ಕೃಷಿ ಕ್ಷೇತ್ರವೇ. ಸಮೃದ್ಧ ಬೆಳೆಯಾಗಿದೆ. ಉಗ್ರಾಣಗಳು ತುಂಬಿಹೋಗಿವೆ ಎಂದರು.