




ಕೋಲ್ಕತ್ತಾ: ವಂಚನೆ ಪ್ರಕರಣವೊಂದರಲ್ಲಿ ಬಾಲಿವುಡ್ ನಟ ಸೋನು ಸೂದ್ ಅವರಿಗೆ ಪಂಜಾಬ್ ನ ಲುಧಿಯಾನಾ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ. ಲುಧಿಯಾನಾ ಜ್ಯುಡೀಷಿಯಲ್ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ವಾರೆಂಟ್ ಜಾರಿಗೊಳಿಸಿದ್ದಾರೆ.
ಸುಮಾರು 10 ಲಕ್ಷ ರೂಪಾಯಿ ವಂಚನೆ ಆರೋಪಿಸಿ ಲೂಧಿಯಾನಾದ ವಕೀಲ ರಾಜೇಶ್ ಖನ್ನಾ ಎಂಬವರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಮೋಹಿತ್ ಶುಕ್ಲಾ ನಕಲಿ ರಿಜಿಕಾ ಕಾಯಿನ್ ನಲ್ಲಿ ಹೂಡಿಕೆ ಮಾಡುವ ಆಮಿಷ ತೋರಿಸಿ ವಂಚಿಸಿದ್ದರು ಎಂದು ಆಪಾದಿಸಲಾಗಿತ್ತು. ಈ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ಕೋರ್ಟ್, ಸೋನು ಸೂದ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಪ್ರತಿ ಬಾರಿಯೂ ಗೈರುಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಲೂಧಿಯಾನಾ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ರಮಣಪ್ರೀತ್ ಕೌರ್ ವಾರೆಂಟ್ ಜಾರಿಗೊಳಿಸಿದ್ದರು.
ಸೋನು ಸೂದ್ ಅವರನ್ನು ಬಂಧಿಸಿ ಹಾಜರುಪಡಿಸುವಂತೆ ಮುಂಬೈನ ಅಂಧೇರಿ ಪಶ್ಚಿಮದ ಓಶಿವಾರಾ ಪೊಲೀಸ್ ಠಾಣಾಧಿಕಾರಿಯವರಿಗೆ ಕೋರ್ಟ್ ನಿರ್ದೇಶನ ನೀಡಿದೆ. ಕಾಸಾಬ್ಲಾಂಕಾ ಅಪಾರ್ಟೆಂಟ್ ನ ಮನೆಸಂಖ್ಯೆ 605/606ರ ನಿವಾಸಿ ಸೋನು ಸೂದ್ ನ್ಯಾಯಾಲಯಕ್ಕೆ ಹಾಜರಾಗಲು ವಿಫಲರಾದ ಹಿನ್ನೆಲೆಯಲ್ಲಿ (ಸಮನ್ಸ್ ಗಳನ್ನು ಪಡೆಯಲು ತಪ್ಪಿಸಿಕೊಂಡಿದ್ದರಿಂದ ಅಥವಾ ಹಾಜರಾಗಲು ವಿಫಲರಾಗಿದ್ದರಿಂದ) ಸಮನ್ಸ್ ನೀಡಲಾಗುತ್ತಿದೆ. ಸೋನು ಸೂದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಈ ಮೂಲಕ ಆದೇಶಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಯನ್ನು ಫೆ.10 ಕ್ಕೆ ಕೋರ್ಸ್ ನಿಗದಿಪಡಿಸಿದೆ.