ಒಲಿಂಪಿಕ್ ಪದಕ ವಿಜೇತರಾದ ಪಿ.ವಿ. ಸಿಂಧು ಹಾಗೂ ನೀರಜ್ ಚೋಪ್ರಾ ಹೆಸರಿರುವ ಮಂದಿಗೆ ಉಚಿತ ಇಂಧನ ನೀಡಲು ತಮಿಳುನಾಡಿನಲ್ಲಿರುವ ಪೆಟ್ರೋಲ್ ಪಂಪ್ ಒಂದು ನಿರ್ಧರಿಸಿದೆ. ಈ ಪೆಟ್ರೋಲ್ ಪಂಪ್ ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿರುವ ತಿರುಮಣಿಲಯೂರ್ ಎಂಬ ಊರಿನಲ್ಲಿದೆ.
ನೀರಜ್ ಚೋಪ್ರಾ ಒಲಿಂಪಿಕ್ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರಿಗೆ ಸನ್ಮಾನಿಸುವ ಸಲುವಾಗಿ ನೀರಜ್ ಹೆಸರಿನ ಮಂದಿಗೆ ಎರಡು ಲೀಟರ್ನಷ್ಟು ಉಚಿತ ಪೆಟ್ರೋಲ್ ನೀಡಲು ನಿರ್ಧರಿಸಿದ್ದೇವೆ. ಇದುವರೆಗೂ ನೀರಜ್ ಹೆಸರಿನ ಕೇವಲ ಮೂರು ಮಂದಿ ಮಾತ್ರವೇ ನಮ್ಮ ಪಂಪ್ಗೆ ಬಂದಿದ್ದಾರೆ. ಏಕೆಂದರೆ ನೀರಜ್ ನಮ್ಮಲ್ಲಿ ಸಾಮಾನ್ಯವಾದ ಹೆಸರಲ್ಲ. ತಮಿಳು ನಾಡಿನಲ್ಲಿ ಸಿಂಧು ಬಹಳ ಸಾಮಾನ್ಯವಾಗಿ ಕೇಳಿ ಬರುವ ಹೆಸರು. ಆ ಹೆಸರಿನ ಹಲವು ಜನರು ಬರುತ್ತಾರೆ ಇನ್ನೂ ನಿರೀಕ್ಷೆಯಿದೆ,” ಎಂದು ಪೆಟ್ರೋಲ್ ಪಂಪ್ ಮಾಲೀಕ ಮಲಯಪ್ಪಸ್ವಾಮಿ ತಿಳಿಸಿದ್ದಾರೆ.
ಬುಧವಾರದಿಂದ ಚಾಲ್ತಿಯಾಗಿರುವ ಈ ಅಭಿಯಾನ ಶುಕ್ರವಾರದವರೆಗೂ ಇರಲಿದೆ ಎಂದು ಪೆಟ್ರೋಲ್ ಪಂಪ್ ಮಾಲೀಕ ಎ.ಆರ್. ಮಲಯಪ್ಪಸ್ವಾಮಿ ತಿಳಿಸಿದ್ದಾರೆ. ಇವರು ಪಿಎಂಕೆ ಪಕ್ಷದಿಂದ ಶಾಸಕರಾಗಿದ್ದರು. ಈ ಆಫರ್ ಪಡೆಯಲು ಜನರು ತಮ್ಮ ಆಧಾರ್ ಕಾರ್ಡ್ ತೋರಿಸಬೇಕು. “ಸತ್ತ ಮೇಲೆ ನಾವು ಹೊತ್ತೊಯ್ಯುವುದಾದರೂ ಏನು? ಈ ರೀತಿಯ ಅಭಿಯಾನಗಳ ಮೂಲಕ ನಮ್ಮ ಯುವಕರ ಮೊಗದಲ್ಲಿ ಸ್ವಲ್ಪ ಸಂತಸ ತರೋಣ,” ಎಂದು ಮಲಯಪ್ಪಸ್ವಾಮಿ ಹೇಳಿದ್ದಾರೆ.