ಗಂಗಾವತಿ: ತಾಲ್ಲೂಕಿನ ಸಣಾಪುರದಲ್ಲಿ ಪ್ರೀತಿಸಿ ಮದುವೆಯಾದ ಯುವತಿಯೊಬ್ಬಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಶವವಾಗಿ ಪತ್ತೆಯಾದ ಯುವತಿ ಶಿಲ್ಪಾ (19). ಈಕೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹೊಳೆಹೊನ್ನೂರು ಹೋಬಳಿಯ ಹೊಸಕೊಪ್ಪ ಗ್ರಾಮದಲ್ಲಿ ವಾಸವಿದ್ದರು. ಕಳೆದ ಡಿಸೆಂಬರ್ ನಲ್ಲಿ ಫೇಸ್ ಬುಕ್ ಮೂಲಕ ಪರಿಚಯವಾದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮಂಗಳವಾರ ರಾತ್ರಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಯುವತಿಯ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯ ಪಾಲಕರು ಇದನ್ನು ಕೊಲೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಗಂಗಾವತಿ ತಾಲ್ಲೂಕಿನ ಸಾಣಾಪುರದ ವಿಕ್ರಂ (22) ಎಂಬ ಯುವಕ ಕಳೆದ 1 ವರ್ಷದ ಹಿಂದೆ ಫೇಸ್ ಬುಕ್, ವಾಟ್ಸಾಪ್, ಟ್ವಿಟ್ಟರ್, ಮುಖಾಂತರ ಪರಿಚಯವಾಗಿದ್ದು, ಕಳೆದ ಡಿಸೆಂಬರ್ 20 ರಂದು ಇಬ್ಬರು ಮದುವೆಯಾಗಿದ್ದಾರೆ. ನಂತರ ಇಬ್ಬರೂ ಸಾಣಾಪುರದ ಯುವಕನ ಮನೆಯಲ್ಲಿ ಜೀವನ ಸಾಗಿಸುತ್ತಿದ್ದು, ಇತ್ತೀಚೆಗೆ ವರದಕ್ಷಿಣೆ ಮತ್ತು ಪ್ರೀತಿಸಿ ಮದುವೆಯಾಗಿರುವ ಕುರಿತು ಯುವಕನ ಪಾಲಕರು ಯುವತಿಗೆ ಕಿರುಕುಳ ನೀಡುತ್ತಿದ್ದರೆಂದು ಯುವತಿ ಮುಂಚಿತವಾಗಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ.
ಮಂಗಳವಾರ ರಾತ್ರಿ ತಮ್ಮ ಮಗಳ ಕೊಲೆ ನಡೆದಿದೆ ಎಂದು ಯುವತಿಯ ಪಾಲಕ ಸಂತೋಷ್ ಪೀಟರ್ ಸನ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.