ತಿರುಪಥೂರ್: ತಿರುಪಥೂರ್ ಜಿಲ್ಲೆಯ ವನಿಯಂಬಾಡಿ ಎಂಬ ಗ್ರಾಮದಲ್ಲಿ 20 ವರ್ಷದ ಯುವಕನೊಬ್ಬ ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತಪಟ್ಟ ಯುವಕನನ್ನು ಕೆ. ಸಂಜೀವ್ (20) ಎಂದು ಗುರುತಿಸಲಾಗಿದೆ. ಮನೆ ಬಳಿಯಿದ್ದ ಕೃಷಿ ಭೂಮಿಗೆ ನಿನ್ನೆ ಮಧ್ಯಾಹ್ನ ಯುವಕ ಟ್ರ್ಯಾಕ್ಟರ್ ನಲ್ಲಿ ತೆರಳಿದ್ದಾನೆ. ಈ ವೇಳೆ ಸೆಲ್ಫೀ ತೆಗೆದುಕೊಳ್ಳಲು ಆರಂಭಿಸಿದ್ದು, ಮತ್ತಷ್ಟು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ನಿರ್ಧರಿಸಿದ ಆತ ಟ್ರ್ಯಾಕ್ಟರ್ ಆನ್ ಮಾಡಿ ಫೋಟೋ ತೆಗೆದುಕೊಳ್ಳಲು ಆರಂಭಿಸಿದ್ದಾನೆ. ಈ ವೇಳೆ ಟ್ರ್ಯಾಕ್ಟರ್ ಹತ್ತಿರದಲ್ಲಿದ್ದ 120 ಅಡಿ ಆಳದ ಬಾವಿಗೆ ಬಿದ್ದಿದ್ದು, ಘಟನೆಯನ್ನು ಗಮನಿಸಿದ ಸ್ಥಳದಲ್ಲಿಯೇ ಇದ್ದ ಕೃಷಿಕನೊಬ್ಬ ಸ್ಥಳೀಯ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾನೆ.
ಕೂಡಲೇ ಅಗ್ನಿಶಾಮಕ ದಳ ಕಚೇರಿಯ ಅಧಿಕಾರಿಗಳು 8 ಮಂದಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ. ಮೃತದೇಹ ಹೊರಗೆ ತೆಗೆಯಲು ಬಾವಿಯಲ್ಲಿದ್ದ ನೀರನ್ನು ಹೊರಗೆ ತೆಗೆಯಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.