



2017ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಾಹಿತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣದಲ್ಲಿ ವಿಜಯಪುರದ ಇಬ್ಬರು ಆರೋಪಿತರನ್ನೂ ಖಾಕಿ ಪಡೆ ಅರೆಸ್ಟ್ ಮಾಡಿತ್ತು. ಸುಮಾರು ಆರುವರೆ ವರ್ಷಗಳ ಬಳಿಕ ಆ ಇಬ್ಬರು ಆರೋಪಿತರಿಗೆ ಜಾಮೀನು ಸಿಕ್ಕಿದ್ದು, ತವರಿಗೆ ಆಗಮಿಸಿದ್ಧಾರೆ. ಹಿಂದೂಪರ ಸಂಘಟನೆಗಳು ಅವರಿಬ್ಬರಿಗೂ ಅದ್ದೂರಿ ಸ್ವಾಗತ ಮಾಡಿದ್ದಾರೆ.
ಕಳೆದ 2018 ಜೂನ್ 13 ರಂದು ಜಿಲ್ಲೆಯ ಸಿಂದಗಿ ಪಟ್ಟಣದ ಬಸವನಗರ ವಾಸಿ ಪರಶುರಾಮ್ ವಾಗ್ಗೆರೆಯನ್ನು ಗೌರಿ ಲಂಕೇಶ ಹತ್ಯೆ ಆರೋಪದ ಮೇಲೆ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್ಐಟಿ ತಂಡ ಬಂಧಿಸಿತ್ತು. ಬಳಿಕ ಇದೇ ಆರೋಪದ ಮೇಲೆ ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆಯನ್ನೂ ಬಂಧಿಸಲಾಗಿತ್ತು. ಗೌರಿ ಹತ್ಯೆಯಲ್ಲಿ ಒಟ್ಟು 25 ಜನ ಆರೋಪಿತರನ್ನು ಎಸ್ಐಟಿ ತಂಡ ಬಂಧಿಸಿತ್ತು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಸಹ ಆರೋಪಿತರಿಗೆ ಜಾಮೀನು ಸಿಕ್ಕಿರಲಿಲ್ಲ.
ಗೌರಿ ಮರ್ಡರ್ ಕೇಸ್ನಲ್ಲಿ ಸುಮಾರು ಆರುವರೆ ವರ್ಷಗಳ ಕಾಲ ಸೆರೆವಾಸ ಅನುಭವಿಸಿರುವ ಮನೋಹರ್ ಯಡವೆ ಕೆಲ ಕಾಲ ಶಿವಮೊಗ್ಗ ಕಾರಾಗೃಹದಲ್ಲಿ ಹಾಗೂ ಪರಶುರಾಮ ವಾಗ್ಮೋರೆ ಕೆಲ ಕಾಲ ಬಳ್ಳಾರಿ ಕಾರಗೃಹದಲ್ಲಿ ಇದ್ದರು. ಸದ್ಯ ಇಬ್ಬರೂ ಪರಪ್ಪನ ಅಗ್ರಹಾರದಲ್ಲಿದ್ದರು, ಮೊನ್ನೆ ಜಾಮೀನು ಸಿಕ್ಕಿದ್ದು ನಿನ್ನೆ ಕಾರಾಗೃಹದಿಂದ ಬಿಡುಡಗೆಯಾಗಿದ್ದಾರೆ. ಅಲ್ಲಿಂದ ವಿಜಯಪುರಕ್ಕೆ ಆಗಮಿಸಿದ್ದಾರೆ. ಇಲ್ಲಿನ ಹಿಂದೂ ಪರ ಸಂಘಟನೆಯವರು ಇಬ್ಬರನ್ನು ಸ್ವಾಗತ ಮಾಡಿದ್ದು ಇವರೆಲ್ಲ ನಿರಪರಾಧಿಗಳು. ಮುಂದಿನ ದಿನಗಳಲ್ಲಿ ಇವರು ನಿರಪರಾಧಿಗಳಾಗಿ ಹೊರ ಬರುತ್ತಾರೆಂದು ಹಿಂದೂ ಪರ ಸಂಘಟನೆಗಳ ಮುಖಂಡರು ವಿಶ್ವಾಸ ಹೊರ ಹಾಕಿದ್ದಾರೆ. ಇಂದು ವಿಶೇಷ ಪೂಜೆ ಸಲ್ಲಿಸಿ ಸ್ವಾಗತ ಮಾಡಿದ್ದಾಗಿ ಹೇಳಿದ್ಧಾರೆ.