ಪುತ್ತೂರು:ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ನ ತಾಲೂಕು ಸಮಿತಿ ಅಧ್ಯಕ್ಷರಿಗೆ ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲ್ ಇದರ ತಾಲೂಕು ಸಮಿತಿ ಅಧ್ಯಕ್ಷ ಕೆಡೆಂಜಿಗುತ್ತು ಪ್ರವೀಣ್ ಕುಮಾರ್ ಅವರ ದೂರು ನೀಡಿದಂತೆ ಪ್ರಕರಣ ದಾಖಲಾಗಿದೆ.’ನಾನು ಫೆ.12ರಂದು ಸಂಕ್ರಮಣವಾದುದರಿಂದ ಶ್ರೀ ಕ್ಷೇತ್ರದಲ್ಲಿ ಸ್ನೇಹಿತರಾದ ದಯಾನಂದ ಮತ್ತು ಸದಾನಂದ ಅವರೊಂದಿಗೆ ಪೂಜೆಗೆಂದು ಹೋದಾಗ ಕ್ಷೇತ್ರದ ಧರ್ಮಚಾವಡಿಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಅವರು ನನ್ನನ್ನು ಒಳಗೆ ಹೋಗದಂತೆ ತಡೆದರದಲ್ಲದೆ ಅವರೊಂದಿಗಿದ್ದ ದೀಪಕ್, ಲಕ್ಷ್ಮಣ, ಪ್ರವೀಣ್ ಅವರು ಕೈಯಿಂದ ಹೊಡೆದಾಗ ಅಲ್ಲಿದ್ದ ಪೊಲೀಸರು ಬಂದು ತಡೆದಿದ್ದಾರೆ.
ಆಗ ಜಯಂತ್ ನಡುಬೈಲು ಅವರು ನನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಅವರು ದೂರು ನೀಡಿದ್ದರು. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರವೀಣ್ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಸೆಕ್ಷನ್ 341, 323, 506ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.