ವಿಟ್ಲ: ರಾತ್ರಿ ಮಲಗಿದ್ದ ವೇಳೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿರುವ ಘಟನೆ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ಹಂಝ ರವರು ಮಾ. 9 ರಂದು ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ತಮ್ಮ ಸಂಬಂಧಿಕರು ಹಾಗೂ ಅವರ ಮಕ್ಕಳೊಂದಿಗೆ ಹೋಗಿ ರಾತ್ರಿ ಉಳಕೊಳ್ಳಲು ತಮ್ಮ ಮನೆಗೆ ವಾಪಸು ಬಂದಿರುತ್ತಾರೆ.
ಬಳಿಕ ಮನೆಯ ಕೆಳಮಹಡಿಯ ಕೋಣೆಯಲ್ಲಿ ಬಂದಿದ್ದ ಸಂಬಂಧಿಕರು ಮಲಗಿದ್ದು, ಅವರೊಂದಿಗೆ ಹಂಝ ರವರ ಪತ್ನಿ ಕೂಡಾ ಅದೇ ಕೋಣೆಯಲ್ಲಿ ಮಲಗಿರುತ್ತಾರೆ. ಹಂಝ ರವರು ಮೇಲಿನ ಮಹಡಿಯ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 4.00 ಗಂಟೆಯ ಹೊತ್ತಿಗೆ ಹಂಝ ರವರ ಹೆಂಡತಿಯು ಎಚ್ಚರಗೊಂಡು ಎದ್ದು ಮನೆಯ ಹಿಂಬದಿಗೆ ಬಂದಾಗ ಹಿಂಬಾಗಿಲು ತೆರೆದುಕೊಂಡಿತ್ತು.
ಕೋಣೆಯಲ್ಲಿ ಮಲಗಿದ್ದ ಸಂಬಂಧಿ ಮಿಸ್ರಿಯಾಳು ಧರಿಸಿದ್ದ 14 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್, 10 ಗ್ರಾಂ ತೂಕದ ಚಿನ್ನದ ಬಳೆ ಹಾಗೂ 22 ಗ್ರಾಂ ತೂಕದ ಚಿನ್ನದ ಕಾಲುಚೈನ್, ತಹಿಸಿಯಾ ಭಾನು ಧರಿಸಿದ್ದ 16 ಗ್ರಾಂ ತೂಕದ ಚಿನ್ನದ ಕೈ ಬ್ರಾಸ್ ಲೆಟ್ ಹಾಗೂ 25 ಗ್ರಾಂ ತೂಕದ ಚಿನ್ನದ ಕಾಲು ಚೈನ್ ಹಾಗೂ ಮೈಮೂನಾರವರು ಧರಿಸಿದ್ದ ತಲಾ 10 ಗ್ರಾಂ ತೂಕದ ಚಿನ್ನದ ಬಳೆ-2ನ್ನು ಮನೆಯ ಮಹಡಿಯ ಹಿಂಬಾಗಿಲಿನ ಚಿಲಕವನ್ನು ಯಾವುದೋ ಆಯುಧದಿಂದ ಬಲತ್ಕಾರವಾಗಿ ತೆರೆದು ಒಳಪ್ರವೇಶಿಸಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಒಟ್ಟು 107 ಗ್ರಾಂ ನಷ್ಟು ಚಿನ್ನ ಕಳವಾಗಿದ್ದು, ಚಿನ್ನಾಭರಣದ ಮೌಲ್ಯ ರೂ. 4,28,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಹಂಝ ರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.