ಮನೆಯಿಂದ ಆಚೆ ಹೋಗುವ ವೇಳೆ ಪತ್ನಿ ಸುಗಂಧ ದ್ರವ್ಯ ಹಾಕಿದ್ದಕ್ಕೆ ವಾಗ್ವಾದ ನಡೆದು, ಜಗಳ ವಿಕೋಪಕ್ಕೆ ತಿರುಗಿ ಗಂಡ ಗುಂಡು ಹಾರಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು, ಗುಂಡು ಹಾರಿಸಿದ ಬಳಿಕ ಆಕೆಯ ಪತಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಬಿಜೋಯಿಲಿ ಠಾಣಾ ವ್ಯಾಪ್ತಿಯ ಗಣೇಶಪುರ ನಿವಾಸಿ ನೀಲಂ ಜಾತವ್ ಎಂಬಾಕೆ 8 ವರ್ಷಗಳ ಹಿಂದೆ ಮಹೇಂದ್ರ ಜಾತವ್ ಎಂಬಾತನನ್ನು ವಿವಾಹವಾಗಿದ್ದಳು. ಮಹೇಂದ್ರ ಜಾತವ್ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು, ಕಳ್ಳತನ ಪ್ರಕರಣದಲ್ಲಿ ಜೈಲುಪಾಲಾಗಿದ್ದ.
ಗಂಡ ಜೈಲು ಸೇರಿದ ಬಳಿಕ ನೀಲಂ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದಳು. ಮಹೇಂದ್ರ ಜಾತವ್ ನಾಲ್ಕು ವರ್ಷಗಳ ಜೈಲುವಾಸ ಮುಗಿಸಿ ಒಂದು ವರ್ಷದ ಹಿಂದಷ್ಟೇ ಜೈಲಿನಿಂದ ಹೊರಬಂದು ತನ್ನ ಹೆಂಡತಿಯೊಂದಿಗೆ ಆಕೆಯ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ.
ಶನಿವಾರ ನೀಲಂ ಮನೆಯಿಂದ ಹೊರಗಡೆ ಹೋಗುವ ಸಂದರ್ಭ ಸುಗಂಧ ದ್ರವ್ಯವನ್ನು ಹಾಕಿದ್ದು, ಇದರ ಬಗ್ಗೆ ಪತಿ ಮಹೇಂದ್ರ ಆಕೆಯನ್ನು ಪ್ರಶ್ನಿಸಿದ್ದಾನೆ. ಇದರಿಂದಾಗಿ ದಂಪತಿ ನಡುವೆ ವಾಗ್ವಾದ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೋಪದ ಭರದಲ್ಲಿ ಪತಿ ಗನ್ ತೆಗೆದು ಪತ್ನಿಯ ಎದೆಗೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.