ಹಾಸನ : ಜೆಡಿಎಸ್ ಯುವ ನಾಯಕ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಮಂಜುನಾಥ ಸ್ವಾಮಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ಸಾಗೋಣ ಎಂಬ ವಾಕ್ಯದಡಿ ಪ್ರಜ್ವಲ್ ರೇವಣ್ಣ ಪಾದಯಾತ್ರೆ ಹೊರಟಿದ್ದಾರೆ.
ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಬರುವ ಭಕ್ತರೊಂದಿಗೆ ಹಾಸನ – ಆಲೂರು – ಸಕಲೇಶಪುರ – ಶಿರಾಢಿಘಾಟ್ ಮಾರ್ಗವಾಗಿ ಧರ್ಮಸ್ಥಳದವರೆಗೆ ಪಾದಯಾತ್ರೆ ಮಾಡಲಿದ್ದಾರೆ. ಹಾಸನದಿಂದ ಧರ್ಮಸ್ಥಳದವರೆಗಿನ 210 ಕಿಲೋಮೀಟರ್ ದೂರವನ್ನು ಪಾದಯಾತ್ರೆಯ ಮೂಲಕ 5 ದಿನಗಳಲ್ಲಿ ಕ್ರಮಿಸಿ ಪ್ರಜ್ವಲ್ ರೇವಣ್ಣ ಪಾದಯಾತ್ರೆಯನ್ನು ನಡೆಸಲಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪ್ರಜ್ವಲ್ ರೇವಣ್ಣ, ನಮ್ಮ ಮನೆ ದೇವರು ಶಿವ, ಶಿವನ ಹೆಸರಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದೆ. ನನ್ನ ಹೋರಾಟಕ್ಕೂ ಮುಂಚೆ ಮೊದಲು ಧರ್ಮಸ್ಥಳ ಪಾದಯಾತ್ರೆ ಮಾಡಬೇಕೆಂದುಕೊಂಡಿದ್ದೆ. ಮುಂದೆ ಜಲಧಾರೆ ಪಾದಯಾತ್ರೆ ಆರಂಭವಾಗಲಿದೆ. ಜಲಧಾರೆ ಪಾದಯಾತ್ರೆಗೂ ಮುನ್ನ ಮೊದಲ ಪಾದಯಾತ್ರೆಯಾಗಿ ಧರ್ಮಸ್ಥಳಕ್ಕೆ ತೆರಳುತ್ತಿದ್ದೇನೆ ಎಂದು ಹೇಳಿದ್ದಾರೆ.
ವೈಯಕ್ತಿಕವಾಗಿ ಯಾವ ಹರಕೆಯು ಇಲ್ಲ, ಕೊರೊನಾ ಸಂಕಷ್ಟ ದೂರವಾಗಲಿ ಎಂಬುವುದೆ ನಮ್ಮ ಹಾರೈಕೆ. ಎಲ್ಲಾ ಯುವಕರು, ಜನರ ಬಯಕೆಯಂತೆ ಪಾದಯಾತ್ರೆ ಹೊರಟಿದ್ದೇವೆ. ನಮ್ಮ ಕುಟುಂಬ ಯಾವುದೇ ಕೆಲಸ ಮಾಡೋದಿದ್ದರು ಮೊದಲು ದೇವರ ಪೂಜೆ ಮಾಡಿಯೆ ಮುಂದೆ ಹೋಗೋದು. ಮುಂದಿನ ಹೋರಾಟಕ್ಕೂ ಮುನ್ನ ದೇವರ ಸನ್ನಿದಿಗೆ ಪಾದಯಾತ್ರೆ ಮಾಡಬೇಕೆಂದು ಯಾತ್ರೆ ಹೊರಟಿದ್ದೇನೆ ಎಂದು ತಿಳಿಸಿದರು.