ಹಾಸನ: ಹಾಸನದ ನಂದಿಪುರ ಎಸ್ಟೇಟ್ನಲ್ಲಿ ಅಕ್ರಮವಾಗಿ ನಡೆದ ರೇವ್ ಪಾರ್ಟಿಯಲ್ಲಿ ಮಂಗಳೂರು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೆಬಲ್ ಮತ್ತು ಅವರ ಪುತ್ರ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಇಕನಾಮಿಕ್ ಕ್ರೈಮ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಶ್ರೀಲತಾ ಮತ್ತು ಅವರ ಪುತ್ರ ಅತುಲ್, ಈ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ ಆರೋಪ ಎದುರಿಸುತ್ತಿರುವವರು .
ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಗರ ಸೆನ್ ಪೊಲೀಸ್ ಠಾಣಾ ಮಹಿಳಾ ಕಾನ್ಸ್ಟೇಬಲ್ನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶ ಮಾಡಿದ್ದಾರೆ.
ಗಾಂಜಾ ಸಹಿತ ಹಲವು ಬಗೆಯ ಡ್ರಗ್ಸ್ ಸೇವನೆಯನ್ನು ಈ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ ಬಹುತೇಕರು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಾರ್ಟಿ ಆಯೋಜಿಸಿದ್ದ ಜಾಗದಲ್ಲಿ ಎಂಡಿಎಂಎ, ಎಲ್ಎಸ್ ಡಿ, ಗಾಂಜಾ ಇನ್ನಿತರ ಮಾದಕ ದ್ರವ್ಯಗಳು ಪತ್ತೆಯಾಗಿದ್ದವು. ಇಂತಹ ಪಾರ್ಟಿಯಲ್ಲಿ ಡ್ರಗ್ಸ್ ದಂಧೆಯನ್ನು ತಡೆಯುವ ಉದ್ದೇಶದಿಂದಲೇ ಪೊಲೀಸ್ ಇಲಾಖೆಯಲ್ಲಿ ನಾರ್ಕೋಟಿಕ್ ಇಕನಾಮಿಕ್ ಕ್ರೈಮ್ ಎಂಬ ವಿಭಾಗವಿದೆ. ಆ ವಿಂಗ್ ನಲ್ಲಿ ಶ್ರೀ ಲತಾರವರು ಕರ್ತವ್ಯ ನಿರ್ವಹಿಸುತಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ನಡೆದಿದ್ದ ಈ ರೇವ್ ಪಾರ್ಟಿಯ ಮೇಲೆ ಪೊಲೀಸರು ದಿಢೀರ್ ಎಂದು ರೈಡ್ ಮಾಡಿ, ಪಾರ್ಟಿಯ ಅಮಲಿನಲ್ಲಿದ್ದ 134 ಮಂದಿಯನ್ನು ವಶಕ್ಕೆ ಪಡೆದಿದ್ದರು. ಪೊಲೀಸರು ವಶಕ್ಕೆ ಪಡೆದವರಲ್ಲಿ ಶ್ರೀಲತಾ ಕೂಡ ಒಬ್ಬರು. ಬಳಿಕ ಇವರ ರಕ್ತದ ಸ್ಯಾಂಪಲ್ ಪಡೆದು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಆದರೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಅವರ ಮಗ ಅತುಲ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ಎರಡು ದಿನಗಳಲ್ಲಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗುವುದು. ಪೊಲೀಸ್ ವಶದಲ್ಲಿದ್ದ ಎಸ್ಟೇಟ್ ಮಾಲೀಕ ಗಗನ್, ಬೆಂಗಳೂರಿನ ಮುರುಗೇಶ್ಪಾಳ್ಯ ನಿವಾಸಿ ಸೋನಿ, ಬನ್ನೇರುಘಟ್ಟ ನಿವಾಸಿ ಪಂಕಜ್ ಅವರ ಬಳಿ ಗಾಂಜಾ ಹಾಗೂ ಇತರ ಮಾದಕ ವಸ್ತುಗಳು ಪತ್ತೆಯಾದ ಕಾರಣ, ಇವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ವಶಕ್ಕೆ ಪಡೆಯಲಾಗಿದೆ’ ಎಂದು ಡಿವೈಎಸ್ಪಿ ಬಿ.ಆರ್. ಗೋಪಿ ತಿಳಿಸಿದ್ದಾರೆ.
ಆದರೇ ಪೊಲೀಸ್ ವಿಚಾರಣೆ ವೇಳೆ ಶ್ರೀ ಲತಾ ರವರು ತಾನು ತನ್ನ ಮಗನನ್ನು ಕರೆದುಕೊಂಡು ಹೋಗಲು ಬಂದಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಸಿಬಂದಿ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಂಗಳೂರು ಪೊಲೀಸ್ ಆಯುಕ್ತ ಏನ್ ಶಶಿಕುಮಾರ್ ನಿರ್ದೇಶಿಸಿದ್ದರು.
ಮಂಗಳೂರು, ಮಣಿಪಾಲ ಹಾಗೂ ಬೆಂಗಳೂರಿನಲ್ಲಿ ಕಟ್ಟುನಿಟ್ಟಿನ ಕೊವೀಡ್ ನಿಯಾಮಾವಳಿಗಳು ಹಾಗೂ ಕೊರೊನಾ ಕರ್ಫ್ಯೂ ಜಾರಿಯಲ್ಲಿದ್ದ ಹಿನ್ನಲೆಯಲ್ಲಿ ಹಾಸನ ಜಿಲ್ಲೆಯ ರಿಮೋಟ್ ಏರಿಯಾವನ್ನು ಪಾರ್ಟಿ ನಡೆಸಲು ಆಯ್ಕೆ ಮಾಡಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಶ್ರೀಲತಾ ಮೂಲತಃ ಕೇರಳದವರು. ಕರ್ನಾಟಕದಲ್ಲಿ ಪೊಲೀಸ್ ಆಗಿ ಈ ಹಿಂದೆ ಪಣಂಬೂರು, ಸುರತ್ಕಲ್, ಬಜ್ಪೆಯಲ್ಲಿ ಕೆಲಸ ಮಾಡಿದ್ದ ಶ್ರೀಲತಾ ಕಳೆದ ನಾಲ್ಕು ವರ್ಷಗಳಿಂದ ನಾರ್ಕೋಟಿಕ್ ಠಾಣೆಯಲ್ಲಿದ್ದರು.
ಮಹಿಳಾ ಕಾನ್ಸ್ಟೇಬಲ್ ಮತ್ತು ಆಕೆಯ ಮಗ ಅತುಲ್ ಎಸ್ಟೇಟ್ ಮಾಲೀಕ ಗಗನ್ ಜತೆ ವಾರದ ಹಿಂದಿನಿಂದಲೇ ನಿರಂತರ ಸಂಪರ್ಕ ಹೊಂದಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಪ್ರಕರಣದ ಆರೋಪಿ ಅತುಲ್ ಎಂಬಾತನಿಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಶೀಘ್ರ ಬಂಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.