ಮಂಗಳೂರು: ಸುಮಾರು 15 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಹೆಗ್ಡೆ (41) ನಾಪತ್ತೆಯಾಗಿರುವ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಕನಾಡಿ ನಗರ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದ ಮಂಜುನಾಥ ಹೆಗ್ಡೆ ಅವರನ್ನು ಮಂಗಳೂರು ನಗರ ಸಿಸಿಆರ್ಬಿ ಘಟಕಕ್ಕೆ ಒಒಡಿ ನೆಲೆಯಲ್ಲಿ ವರ್ಗಾವಣೆಗೊಳಿಸಲಾಗಿತ್ತು. ಅಲ್ಲಿ ಕೆಲಸಕ್ಕೆ ವರದಿ ಮಾಡುವುದಾಗಿ ಹೇಳಿ ಜ.13ರಂದು ಮನೆಯಿಂದ ಹೋಗಿದ್ದರು. ಆ ದಿನ ಮಧ್ಯಾಹ್ನ 1 ಗಂಟೆಗೆ ಮನೆಮಂದಿ ಮಂಜುನಾಥ್ರ ಮೊಬೈಲ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು. ಸ್ನೇಹಿತರಲ್ಲಿ, ಪರಿಚಯದವರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದಾಗ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
5.6 ಅಡಿ ಎತ್ತರದ, ಗೋಧಿ ಮೈ ಬಣ್ಣದ, ದುಂಡು ಮುಖದ, ಸಪೂರ ಶರೀರದ, ಬಿಳಿ ಹಾಗೂ ಕ್ರೀಂ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಈ ಕುರಿತಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.