ಗಣಪತಿ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿ ಯ ಕೈಯನ್ನು ಹೆಡ್ಮಾಸ್ಟರ್ ಮುರಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ಕೆಜಿಎಫ್ನ ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿ ಭವ್ಯಶ್ರೀಗೆ ಶಾಲಾ ಮುಖ್ಯ ಶಿಕ್ಷಕಿ ಹೇಮಲತಾರವರು ಥಳಿಸಿ ಕೈಯನ್ನು ಮುರಿದಿದ್ದರು. ಪ್ರಕರಣ ಸಂಬಂಧ ಕೋಲಾರ ಡಿಡಿಪಿಐ ಕೃಷ್ಣಮೂರ್ತಿಯವರು ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬಾಲಕಿಯ ಚಿಕಿತ್ಸೆಗೆ ತಗುಲುವ ಖರ್ಚು ವೆಚ್ಚವನ್ನು ಕೂಡ ಮುಖ್ಯ ಶಿಕ್ಷಕಿಯೇ ಭರಿಸಬೇಕೆಂದು ಸೂಚನೆ ನೀಡಲಾಗಿದೆ.
ಘಟನೆ ಬಗ್ಗೆ ಪೋಷಕರು ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೂರು ಸಲ್ಲಿಸಿದ್ದು, ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಪೋಷಕರು ದೂರು ನೀಡಿದ್ದರು. ಹೀಗಾಗಿ ಶಿಕ್ಷಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗ ಕ್ಷೇಮ ವಿಚಾರಿಸಿದ್ದರು
ಮುಖ್ಯ ಶಿಕ್ಷಕಿಯನ್ನು ವರ್ಗಾವಣೆ ಮಾಡುವಂತೆ ಪೋಷಕರ ಪಟ್ಟು ಹಿಡಿದಿದ್ದು, ಈ ವೇಳೆ ಶಿಕ್ಷಣಾಧಿಕಾರಿ ಮುನಿವೆಂಕಟ ರಾಮಾಚಾರಿ ಅವರು ಶಾಲಾ ಮಕ್ಕಳ ಪೋಷಕರಿಗೆ ಭರವಸೆ ನೀಡಿದ್ದರು