ಯುವಕನೋರ್ವ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿ ಆಗಿರುವ ಘಟನೆ ಬೆಂಗಳೂರು ನಗರದ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ತಮಿಳುನಾಡು ತಿರುವಣಾಮಲೈ ಮೂಲದ ರಾಬಿನ್ (22) ಎಂದು ತಿಳಿದು ಬಂದಿದ್ದು, ಇವರು ರಾಜಾಜಿನಗರದ ಬೋವಿ ಕಾಲೋನಿ (ಬಸವೇಶ್ವರನಗರ) ನಿವಾಸಿ ಎಂದು ತಿಳಿದು ಬಂದಿದೆ. ಇವರು ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಬ್ಯಾಂಕಿನ ವತಿಯಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ರಾಬಿನ್ ಎರಡು ದೂರು ಆಟಗಳಲ್ಲಿ ಜಯಗಳಿಸಿ ಕ್ರಿಕೆಟ್ನಲ್ಲೂ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಹುಮಾನ ವಿತರಣೆ ವೇಳೆ ವೇದಿಕೆ ಮೇಲೆ ರಾಬಿನ್ ಕುಸಿದು ಬಿದ್ದಿದ್ದು, ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಡಿಹೈಡ್ರೆಟ್ ಆಗಿದ್ದರಿಂದ ರಾಬಿನ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯುವಕನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.