ಮಂಗಳೂರು : ಸುಮಾರು ಎರಡುವರೆ ವರ್ಷದಿಂದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹಸಂಯೋಜಕ ಸಮಿತ್ರಾಜ್ ಧರೆಗುಡ್ಡೆ ವಿರುದ್ಧ ಯಾವುದೇ ಪ್ರಕರಣ ದಾಖಲಾಗದೇ ಇದ್ದರೂ ರಾಜಕೀಯ ಒತ್ತಡಕ್ಕೊಳಗಾಗಿ ಕಾನೂನು ಬಾಹಿರವಾಗಿ ಗಡಿಪಾರು ಆದೇಶಕ್ಕೆ ಇಲಾಖೆ ಸಿದ್ಧತೆ ನಡೆಸುತ್ತಿದೆ , ಅವರ ಗಡಿಪಾರು ಆದೇಶಕ್ಕೆ ಪೊಲೀಸ್ ಇಲಾಖೆ ನಡೆಸುತ್ತಿರುವ ಸಿದ್ದತಾ ಕ್ರಮದ ವಿರುದ್ಧ ಹಿಂದೂ ಜಾಗರಣ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಹಿಂಜಾವೇ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಶೆಟ್ಟಿ ಮಾಣಿ.., ಪ್ರಕರಣವಿಲ್ಲದೆ ಕಾನೂನು ಬಾಹಿರವಾಗಿ ಗಡಿಪಾರಿಗೆ ಆದೇಶ ಮಾಡಿದ್ದಲ್ಲಿ ಆದೇಶದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್ ದಂಧೆ ಮತ್ತು ನಗರ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಮೊದಲು ನಿಯಂತ್ರಿಸಿ ನಂತರ ನೋಟಿಸ್ ನೀಡದೆ ಗಡಿಪಾರು ಮಾಡಲು ಪ್ರಯತ್ನಿಸಿ ಎಂದರು. ಒಂದು ವೇಳೆ ಇದು ಮುಂದುವರಿದರೆ ಮುಂದೆ ಆಗುವ ಅನಾಹುತಕ್ಕೆ ಇಲಾಖೆಯೇ ನೇರ ಹೊಣೆಯಾಗುತ್ತದೆ ಎಂದು ತಿಳಿಸಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಾರ್ಯಕರ್ತರ ತೇಜೋವಧೆ ಮತ್ತು ಮನೋಬಲವನ್ನು ಕುಗ್ಗಿಸುವ ಕಾರ್ಯ ನಡೆಸುತ್ತಾ ಬಂದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದು ಸಂಘಟನೆ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಾಗರಣದ ಪ್ರಾಂತ ಸಮಿತಿ ಸದಸ್ಯ ಹರೀಶ್ ಶಕ್ತಿನಗರ, ಜಿಲ್ಲಾ ನ್ಯಾಯ ಜಾಗರಣ ಸಂಯೋಜಕ ರಾಜೇಶ್, ಪ್ರಮುಖರಾದ ಪ್ರಶಾಂತ್ ಕೆಂಪುಗುಡ್ಡೆ, ಗಣೇಶ್ ಕೆದಿಲ, ಮೂಡುಬಿದಿರೆ ತಾಲೂಕು ಸಂಯೋಜಕ ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.