ಬಂಟ್ವಾಳ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎರಡು ಮರಳಿನ ಲಾರಿ ಸಮೇತ, ನಾಲ್ಕು ಮಂದಿ ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೋಲೀಸ್ ತಂಡ ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣರವರು ಸಿಬ್ಬಂದಿಗಳೊಂದಿಗೆ, ದಿನಾಂಕ: 21.03.2024 ರಂದು ಬೆಳಿಗ್ಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಅದೇ ಮಾರ್ಗವಾಗಿ ಬಂದ KA-21-C-5861 ಹಾಗು KA-19-C-5861 ನೇ ನೊಂದಣಿ ಸಂಖ್ಯೆಗಳ ಎರಡು ಟಿಪ್ಪರ್ ಲಾರಿಗಳನ್ನು ತಡೆದು ಪರಿಶೀಲಿಸಿದಾಗ, ಲಾರಿಗಳಲ್ಲಿ ಮರಳು ತುಂಬಿಸಿರುವುದು ಕಂಡುಬಂದಿದೆ.
ಈ ಬಗ್ಗೆ ಚಾಲಕರಲ್ಲಿ ವಿಚಾರಿಸಿದಾಗ, ಲಾರಿಗಳಲ್ಲಿ ವಳಚ್ಚಿಲ್ ನೇತ್ರಾವತಿ ನದಿ ದಡದಿಂದ ಯಾವುದೇ ಅನುಮತಿ ಇಲ್ಲದೇ ಅಕ್ರಮವಾಗಿ ಮರಳು ಕಳವು ಮಾಡಿ ಸಾಗಿಸುತ್ತಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳಾದ ಕನ್ಯಾನ ನಿವಾಸಿ ಅಬ್ದುಲ್ ರಹಮಾನ,ಅರ್ಕುಳ ನಿವಾಸಿ ಮಹಮ್ಮದ್ ಸಾದಿಕ್ , ಕಂಬಳಬೆಟ್ಟು ನಿವಾಸಿ ಗೌತಮ್, ಎಂಬವರನ್ನು ಪೋಲೀಸರು ವಶಕ್ಕೆ ಪಡೆದುಕೊಂಡು,. ಪ್ರಕರಣ ದಾಖಲಿಸಿ ಲಾರಿಗಳನ್ನು ಮರಳಿನ ಸಮೇತವಾಗಿ ವಶಕ್ಕೆ ಪಡೆದು, ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 61/2024, ಕಲಂ: 379 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.