ಕಲಿಕೆಯಾಗುವುದು ಕೇವಲ ಆರಂಭದಿಂದಲ್ಲ, ನಿರಂತರ ಶ್ರಮದಿಂದ – ರಾಜಗೋಪಾಲ ಜೋಶಿ
ಅಮೂಲ್ಯವಾದ ಬಾಲ್ಯಕ್ಕೆ ಜ್ಞಾನ ಮತ್ತು ಅನುಭವದ ಧಾರೆ ಎರೆದರೆ ಹರೆಯ ಉಜ್ವಲವಾಗುತ್ತದೆ. ಈ ಕಲಿಕೆಯ ಕಾರ್ಯ ಆರಂಭ ಶೂರತ್ವದಿಂದ ಕೂಡಿರದೆ ನಿರಂತರ ಸಾಧನೆಯಿಂದ ಸಾಗಲಿ ಎಂದು ಹವ್ಯಾಸಿ ಯಕ್ಷಗಾನ ಹಿಮ್ಮೇಳ ಸವ್ಯಸಾಚಿ ರಾಜಗೋಪಾಲ ಜೋಶಿಯವರು ಎರುಂಬು ಶ್ರೀ ದಿವ್ಯಜ್ಯೋತಿ ಮಿತ್ರವೃಂದದ ಸಹಯೋಗದಲ್ಲಿ ನಡೆದ ಯಕ್ಷಗಾನ ನಾಟ್ಯ ತರಗತಿಯನ್ನು ಉದ್ಘಾಟಿಸುತ್ತ ಮಾತನಾಡಿದರು.
ಯಕ್ಷಗಾನವು ನಾಟ್ಯದಂತೆ ಪುರಾಣವನ್ನು ಕಲಿಸುತ್ತ ಸಂಸ್ಕಾರ ಕೊಡುತ್ತದೆ ಎಂದು ಕಟೀಲು ಮೇಳದ ಕಲಾವಿದ, ನಾಟ್ಯಗುರು ಶಿವಾನಂದ ಶೆಟ್ಟಿ ಬಜಕೂಡ್ಲುರವರು ಸಲಹೆಯಿತ್ತರು.
ಸಮಾಜದ ಬೆಳವಣಿಗೆಗೆ ಊರಲ್ಲೊಂದು ಉತ್ತಮ ಶಾಲೆಯಂತೆ ಸಂಘಟನೆ ಬೇಕು ಎಂದು ಕೃಷ್ಣಯ್ಯ.ಕೆ ವಿಟ್ಲ ಅರಮನೆ ಶುಭ ಹಾರೈಸಿದರು.
ಪದ್ಯಾಣ ಉದಯಕೃಷ್ಣ ಭಟ್ ಉಪಸ್ಥಿತರಿದ್ದರು. 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾಟ್ಯ ತರಗತಿಗೆ ಹೆಸರು ನೋಂದಾಯಿಸಿದರು.
ಪೋಷಕರ ಆಶೀರ್ವಾದದ ಜೊತೆಗೆ ಗುರುನಮನ, ಹಿಮ್ಮೇಳ ಜೊತೆಗೆ ಯಕ್ಷಸ್ತುತಿ,ವಿಶೇಷ ಮೆರುಗು ಕೊಟ್ಟಿತ್ತು.
ಗೌರವಾಧ್ಯಕ್ಷ ಮೋಹಂದಾಸ್ ರೈ ಯವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವನ್ನು ಮಿತ್ರವೃಂದದ ಆಧ್ಯಕ್ಷ ರಾಧಾಕೃಷ್ಣ ಎರುಂಬು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಶ್ರೀ ದಿವ್ಯಜ್ಯೋತಿ ಮಿತ್ರವೃಂದದ ಸರ್ವಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.