ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಇದರ ಸಂಯುಕ್ತ ಆಶ್ರಯದಲ್ಲಿ ವಿಟ್ಲ ವಲಯ ಮಟ್ಟದ ಪ್ರತಿಭಾ ಕಾರಂಜಿ 2023-24 ರ ಉದ್ಘಾಟನಾ ಕಾರ್ಯಕ್ರಮ ಜರಗಿತು.
ಜೇಸಿಶಾಲಾ ನಿವೃತ್ತ ಉಪಾಪ್ರಾಂಶುಪಾಲೆ ಹಾಗೂ ಪ್ರಸ್ತುತ ಸಿರಿ ವಿದ್ಯಾಲಯ ಸಾಲೆತ್ತೂರಿನ ಪ್ರಾಂಶುಪಾಲೆ ಶಾಲಿನಿ ನೋಂಡಾ ಕಾರ್ಯಕ್ರಮ ಉದ್ಘಾಟಿಸಿ ಪ್ರತಿಭಾ ಕಾರಂಜಿ ವಿದ್ಯಾರ್ಥಿ ಪ್ರತಿಭೆಯ ಅನಾವರಣಕ್ಕೆ ಅವಕಾಶ ಕಲ್ಪಿಸಿದೆ, ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆಯಿತ್ತರು. ವಿಠ್ಠಲ್ ಜೇಸಿಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸಿ, ಜಗತ್ತಿನ ಶ್ರೇಷ್ಠ ನಿಧಿ ಮಾನವನ ವ್ಯಕ್ತಿತ್ವದಲ್ಲಿ ಅಡಗಿದೆ, ಒಳ್ಳೆಯ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರತಿಭಾ ಕಾರಂಜಿ ಸ್ಫೂರ್ತಿಯಾಗಲೆಂದು ಶುಭಹಾರೈಸಿದರು.
ವಿಟ್ಲ ವಲಯದ ಶಿಕ್ಷಣ ಸಂಯೋಜಕಿ ಸುಧಾರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸುಮಾರು 420 ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಲಿದ್ದಾರೆ. ಒಟ್ಟು 17 ಸಾಮೂಹಿಕ ಸ್ಪರ್ಧೆಗಳು ಮತ್ತು 3 ವೈಯಕ್ತಿಕ ಸ್ಪರ್ಧೆಗಳು ನಡೆಯಲಿವೆಯೆಂದು ತಿಳಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ಸಂಸ್ಥೆಯ ಹಿರಿಯ ನಿರ್ದೇಶಕ ಮೋನಪ್ಪ ಶೆಟ್ಟಿ, ಸಂಸ್ಥೆಯ ನಿರ್ದೇಶಕ ವಿಜಯ ಪಾಯಿಸ್, ಬಂಟ್ವಾಳ ತಾಲೂಕು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕಿರಣಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪುಷ್ಪಾವತಿ, ಚಂದ್ರಶೇಖರ, ಬಿಂದು, ಜ್ಯೋತಿ, ಆಡಳಿತಾಧಿಕಾರಿ ರಾಧಾಕೃಷ್ಣ, ಉಪಪ್ರಾಂಶುಪಾಲೆ ಜ್ಯೋತಿ ಶೆಣೈ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಜಯರಾಮ ರೈ ಸ್ವಾಗತಿಸಿದರು. ವಿಟ್ಲ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಬಿಂದು ವಂದನಾರ್ಪಣೆಗೈದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಸವಿತ ನಿರೂಪಿಸಿದರು. ಶಿಕ್ಷಕಿಯರಾದ ಗೀತಾ ಕೆ, ನಯನಾಕ್ಷಿ, ಅಪರ್ಣ ಸಹಕರಿಸಿದರು. ವಿಟ್ಲ ವಲಯದ ವಿವಿಧ ಹಿರಿಯ, ಕಿರಿಯ ಶಿಕ್ಷಕರು ತೀರ್ಪುಗಾರರಾಗಿ ಸಹಕರಿಸಿದರು.