ಸುಳ್ಯ: ಸಂಸ್ಕೃತದಲ್ಲಿ ಸ್ಪಷ್ಟ ಹಾಗೂ ನಿರರ್ಗಳವಾಗಿ ಶ್ಲೋಕಗಳನ್ನು ಪಠಿಸುವ ಜಾಲ್ಸೂರು ಗ್ರಾಮದ ಮಾಬಲಡ್ಕ ಸರಮಾ ಭಟ್ ಚಿಕ್ಕ ವಯಸ್ಸಿನಲ್ಲಿಯೇ ಇಂಡಿಯಾ ಬುಕ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಸರಮಾ ಭಟ್ ಎಂ ತನ್ನ ಚಿಕ್ಕ ವಯಸ್ಸಿನಲ್ಲಿಯೇ ಎರಡು ವಿಭಾಗಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ತನ್ನ ಹೆಸರನ್ನು ಗಳಿಸಿದ್ದಾಳೆ.
ಜಾಲ್ಸೂರು ಗ್ರಾಮದ ಮಾಬಲಡ್ಕ ಡಾ. ಕೃಷ್ಣ ಭಟ್ ಮತ್ತು ಪುಷ್ಪಗಂಧಿ ದಂಪತಿಗಳ, ಪುತ್ರ ಸುರೇಶ್ ಕುಮಾರ್ ಎಂ. ಮತ್ತು ರಮಾ ಸುರೇಶ್ ದಂಪತಿಗಳ ಪುತ್ರಿ 7ರ ಹರೆಯದ ಸರಮಾ ಭಟ್ ಒಟ್ಟು 40 ನಿತ್ಯ ಪಠಣದ ಶ್ಲೋಕಗಳನ್ನು ಹೇಳುತ್ತಾಳೆ, ಅದರಲ್ಲಿ, ದೊಡ್ಡ ದೊಡ್ಡ ಸ್ತೋತ್ರಗಳಾದ ಕನಕಧಾರ ಸ್ತೋತ್ರ 21 ಚರಣಗಳು, ದೇವಾಪರಾಧ ಕ್ಷಮಾಪಣಾ ಸ್ತೋತ್ರ 12ಚರಣಗಳು, ಶಿವ ಮಾನಸ ಪೂಜಾ ಸ್ತೋತ್ರ 20 ಗೆರೆಗಳು ಇವೆ. 10 ಸಂಸ್ಕೃತ ಸುಭಾಷಿತಗಳು, 12 ಮಾಸಗಳ ಹೆಸರು ಸಂಸ್ಕೃತದಲ್ಲಿ ಪಂಚಾಂಗದ ಪುಕಾರದಲ್ಲಿ ಸಂಸ್ಕೃತದಲ್ಲಿ ಇರುವಂತಹ 15 ದಿನಗಳ ಹೆಸರುಗಳು, 7 ದಿನಗಳ ಹೆಸರುಗಳನ್ನು ಸಂಸ್ಕೃತದಲ್ಲಿ ಸ್ಪಷ್ಟವಾಗಿ, ನಿರರ್ಗಳವಾಗಿ ಪಠಿಸುತ್ತಾಳೆ.
ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಈಕೆಯ ಸಾಧನೆಯ ಹಿಂದಿನ ಪ್ರೇರಣೆಯಾಗಿದ್ದಾರೆ. ತನ್ನ 2ನೇ ವಯಸ್ಸಿನಿಂದಲೇ ಶ್ಲೋಕಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬಂದಿರುವ ಸರಮಾ ನಿತ್ಯವೂ ಕರಾಗ್ರೆ ವಸತೇ ಲಕ್ಷ್ಮೀ ಪಠಣದೊಂದಿಗೆ ದಿನವನ್ನು ಪ್ರಾರಂಭಿಸುತ್ತ ರಾಮಸ್ಕಂದಂ ಹನೂಮಂತಂನಲ್ಲಿ ಪೂರ್ಣಗೊಳಿಸುತ್ತಾರೆ. ಓದುವ ಮೊದಲು, ಊಟದ ಮೊದಲು, ದೀಪ ಹಚ್ಚುವಾಗ ಹೀಗೆ ದಿನದಲ್ಲಿ ಹಲವು ಬಾರಿ ದೇವರ ನಾಮ ಸ್ಮರಣೆ ಅವರ ನಿತ್ಯದ ರೂಢಿ.