ನವದೆಹಲಿ (ನ.13): ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಮೂವರು ಸೈನಿಕರು ಮತ್ತು ಅನೇಕ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಭಾರೀ ಶೆಲ್ ದಾಳಿ ನಡೆಸಿದ್ದು, ಈ ವೇಳೆ ಐವರು ಸೈನಿಕರು ಮತ್ತು ಗಡಿ ಭದ್ರತಾ ಪಡೆ ಅಧಿಕಾರಿ ಸಾವನ್ನಪ್ಪಿದ್ದಾರೆ. ಈ ಘಟನೆ ವೇಳೆ ಐವರು ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 10 ಮಂದಿ ಗಾಯಗೊಂಡಿದ್ದು, ನಾಲ್ಕು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಪಾಕ್ನ ಈ ಅಪ್ರಚೋದಿತ ದಾಳಿಗೆ ಭಾರತ ಕೂಡ ಪ್ರತಿ ದಾಳಿ ನಡೆಸಿದ್ದು, ಅಲ್ಲಿ ಕೂಡ ಅನೇಕ ಸಾವು ನೋವು ಸಂಭವಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ ಎಂಟು ಪಾಕಿಸ್ತಾನ ಸೇನೆ ಯೋಧರು ಹತರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ಹತ್ಯೆಯಾದ ಪಾಕಿಸ್ತಾನ ಆರ್ಮಿ ಸೈನಿಕರ ಪಟ್ಟಿಯಲ್ಲಿ 2-3 ಪಾಕಿಸ್ತಾನ ಆರ್ಮಿ ಸ್ಪೆಷಲ್ ಸರ್ವೀಸ್ ಗ್ರೂಪ್ (ಎಸ್ ಎಸ್ ಜಿ) ಕಮಾಂಡ್ʼಗಳು ಸೇರಿವೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಗುಂಡಿನ ದಾಳಿಯಲ್ಲಿ 10-12 ಪಾಕಿಸ್ತಾನ ಸೇನೆಯ ಯೋಧರು ಗಾಯಗೊಂಡಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಪಾಕಿಸ್ತಾನ ಆರ್ಮಿ ಬಂಕರ್ ಗಳು, ಇಂಧನ ಡಂಪ್ʼಗಳು ಮತ್ತು ಲಾಂಚ್ ಪ್ಯಾಡ್ʼಗಳು ನಾಶವಾಗಿವೆ ಎಂದು ಎಎನ್ ಐ ವರದಿ ಮಾಡಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ ಬಿಎಸ್ ಎಫ್ ಸಬ್ ಇನ್ಸ್ ಪೆಕ್ಟರ್ ಸೇರಿದಂತೆ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಗುರೆಜ್ ಸೆಕ್ಟರ್ ನಿಂದ ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ʼವರೆಗೆ ನಡೆದ ಕದನ ವಿರಾಮ ಉಲ್ಲಂಘನೆಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.