


ಮಂಡ್ಯ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಯುವಕ ಕೊಲೆಯಾಗಿರುವ ಘಟನೆ ಬೋ ರಾಪುರ ಕಾಲೋನಿಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯಲ್ಲಿ ಬೆಟ್ಟಿಂಗ್ ಕಟ್ಟಿ ಗೆದ್ದ ಹಣ ಕೇಳಿದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿ ಕೊಂದು ಹಾಕಿದ್ದಾರೆ. ಎಳೆನೀರು ವ್ಯಾಪಾರಿಯಾಗಿದ್ದ ಪುನಿತ್ ಮೃತ ದುರ್ದೈವಿಯಾಗಿದ್ದಾನೆ.
ಪುನಿತ್ ಸ್ನೇಹಿತ ದರ್ಶನ್ ಶರತ್ ಜೊತೆ ಗುಜರಾತ್ ಹಾಗೂ ಚೆನ್ನೈ ತಂಡದ ನಡುವಿನ ಕ್ವಾಲಿಫಯರ್ ಮ್ಯಾಚ್ ಗೆ ಬೆಟ್ಟಿಂಗ್ ಕಟ್ಟಿದ್ದರು. ಅದರಲ್ಲಿ ದರ್ಶನ್ ಚೆನ್ನೈ ಪರ ಬೆಟ್ ಕಟ್ಟಿದ್ದರೆ, ಶರತ್ ಗುಜರಾತ್ ಟೈಟನ್ ಪರ ಬೆಟ್ಟಿಂಗ್ ಕಟ್ಟಿದ್ದನು. ಕೊನೆಗೆ ಚೆನ್ನೈ ತಂಡ ಗೆದ್ದಿತ್ತು. ಹಾಗಾಗಿ ದರ್ಶನ್ ಗೆ ಶರತ್ 11 ಸಾವಿರ ಹಣ ನೀಡಬೇಕಿತ್ತು. ಆದರೆ ಶರತ್ ಹಣ ನೀಡಿರಲಿಲ್ಲ . ಹಾಗಾಗಿ ದರ್ಶನ್ ಹಾಗೂ ಶರತ್ ನಡುವೆ ಮಾತುಕತೆ ಜೋರಾಗಿತ್ತು . ಮಾತಿಗೆ ಮಾತು ಬೆಳೆದು ದರ್ಶನ್ ಗೆ ಶರತ್ ಹಲ್ಲೆ ನಡೆಸಿದ್ದಾನೆ.
ಈ ವಿಷಯವನ್ನು ದರ್ಶನ್ ತನ್ನ ಗೆಳೆಯ ಪುನೀತ್ ಗೆ ತಿಳಿಸಿದ್ದನು. ಸಿಟ್ಟಿಗೆದ್ದ ಪುನಿತ್ ಶರತ್ ಬಳಿ ಹೋಗಿ ನ್ಯಾಯ ಸರಿಪಡಿಸಲು ಹೋದಾಗ ಜಗಳ ಜೋರಾಗಿ ಶರತ್ ನ ಗ್ಯಾಂಗ್ ಪುನೀತ್ ತಲೆಗೆ ಕಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪುನಿತ್ ನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪುನೀತ್ ಸಾವನ್ನಪ್ಪಿದ್ದಾರೆ.