ಬೆಂಗಳೂರು: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಮಾಜಿ ನಾಯಕಿ ಹಾಗೂ ದಿವಂಗತ ಜಯಲಲಿತಾ ಆಪ್ತೆ ವಿ.ಕೆ ಶಶಿಕಲಾ ಜನವರಿ 27 ರಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಲಿದ್ದಾರೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.
2014 ರಲ್ಲಿ ಅಪಾರ ಸಂಪತ್ತು, ಅಕ್ರಮ ಆಸ್ತಿ ಹೊಂದಿರುವುದಕ್ಕಾಗಿ ಸುಪ್ರಿಂಕೋರ್ಟ್ ಮೆಟ್ಟಿಲೇರಿದ ಈ ವಿಚಾರವಾಗಿ ದಿವಂಗತ ಜೆ. ಜಯಲಲಿತಾ ಸೇರಿದಂತೆ ನಾಲ್ವರಿಗೆ ಶಿಕ್ಷೆ ವಿಧಿಸಲಾಗಿತ್ತು. ಇದೀಗ ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ, ಜನವರಿ 27 ರಂದು ಬಿಡುಗಡೆಯಾಗಲಿದ್ದಾರೆ ಎಂದು ಶಶಿಕಲಾ ಪರ ವಕೀಲ ಎನ್ ರಾಜಾ ಸೆಂಥೂರ್ ಪಾಂಡಿಯನ್ ತಿಳಿಸಿದ್ದಾರೆ.
2017 ರಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆ 2017 ಫೆಬ್ರವರಿ 15 ರಂದು ಶಶಿಕಲಾ ಕಾರಾಗೃಹ ಅಧಿಕಾರಿಗಳ ಎದುರು ಹಾಜರಾಗಿದ್ದರು. ಈ ವೇಳೆ ಶಶಿಕಲಾ ನೀಡಬೇಕಾದ ದಂಡವನ್ನು ನೀಡಿದರೆ ಇದೇ ತಿಂಗಳ 27 ರಂದು ಬಿಡುಗಡೆ ಮಾಡುತ್ತೆವೆ ಎಂದು ನ್ಯಾಯಾಲಯ ತಿಳಿಸಿತ್ತು. ಅದರಂತೆ ಅವರ ಕುಟುಂಬ 10 ಕೋಟಿ ರೂಪಾಯಿಗಳನ್ನು ನ್ಯಾಯಾಲಯಕ್ಕೆ ನೀಡಿದೆ ಎಂದು ತಿಳಿಸಿದ್ದಾರೆ.
ನಾಲ್ಕು ವರ್ಷಗಳ ನಂತರ ಬಿಡುಗಡೆಯಾಗಿ ಬರುತ್ತಿರುವ ಶಶಿಕಲಾ ಅವರಿಗೆ ಉಳಿದುಕೊಳ್ಳಲು ಅವರ ಕುಟುಂಬ ವ್ಯವಸ್ಥೆಯನ್ನು ಮಾಡಿದೆ. ಚೆನ್ನೈನಲ್ಲಿ 2 ಬಂಗಲೆಯನ್ನು ಈಗಾಗಲೇ ಹುಡುಕಿಟ್ಟಿದೆ ಎಂದು ತಿಳಿಸಿದ್ದಾರೆ.