ಬೆಂಗಳೂರು: ಮಂಗಳವಾರ ರಾತ್ರಿ ನಡೆದ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ನೀಡಿದ ದೂರಿನ ಅನ್ವಯ ಎಫ್ ಐ ಆರ್ ದಾಖಲಾಗಿದೆ. ಘಟನೆ ವೇಳೆ ಪೊಲೀಸರ ಕೊಲೆಯತ್ನ ನಡೆಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಫೇಸ್ ಬುಕ್ ನಲ್ಲಿ ಮಾಡಿದ ಫೇಸ್ ಬುಕ್ ಪೋಸ್ಟ್ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ನವೀನ್ ಎಂಬಾತನನ್ನು ಅರೆಸ್ಟ್ ಮಾಡಿಲಾಗಿತ್ತು. ನಂತರ ಡಿ.ಜೆ ಹಳ್ಳಿಯಿಂದ ಆತನನ್ನು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಕರೆತಂದಿದ್ದರು. ಈ ವೇಳೆ ಎಸ್ ಡಿಪಿಐ ಕಾರ್ಯಕರ್ತರು ಕೆ.ಜಿ.ಹಳ್ಳಿ ಠಾಣೆಯನ್ನು ಧ್ವಂಸ ಮಾಡಲು ಯತ್ನಿಸಿದ್ದಲ್ಲದೇ, ಆರೋಪಿ ನವೀನ್ ಕೊಲೆ ಮಾಡಲು ಯತ್ನಿಸಿದ್ದಾರೆ. ರಾತ್ರಿ ವೇಳೆ ಮಾರಾಕಾಸ್ತ್ರಗಳನ್ನು ತಂದಿದ್ದವರನ್ನು ತಡೆಯಲು ಮುಂದಾದಾಗ ಪಿಎಸ್ ಐ ರಾಜೇಶ ಹಾಗೂ ಸಿಬ್ಬಂದಿ ಮಂಜುನಾಥ್ ಎಂಬುವವರನ್ನು ಕೊಲೆ ಮಾಡಲು ಯತ್ನಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಪರಿಸ್ಥಿತಿ ನಿಯಂತ್ರಿಸಲು ಆಶ್ರುವಾಯು ಪ್ರಯೋಗಿಸಲಾಯಿತು. ಬಳಿಕ ಪುಂಡರ ಗುಂಪು ಪೊಲೀಸ್ ಠಾಣೆ ಹಾಗೂ ವಾಹನಗಳ ಮೇಲೆ ಪೆಟ್ರೋಲ್ ಬಾಂಬ್ ಗಳಿಂದ ದಾಳಿ ಮಾಡಿದ್ದಾರೆ. ನಂತರ ಸುಮಾರು 800ಕ್ಕೂ ಅಧಿಕ ದುಷ್ಕರ್ಮಿಗಳು ಠಾಣೆಯೊಳಗೆ ನುಗ್ಗಲು ಯತ್ನಿಸಿದರು. ನಂತರ ಕೆ.ಜಿ.ಹಳ್ಳಿ ಇನ್ಸ್ ಪೆಕ್ಟರ್ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಗುಂಪು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಬಳಿಕ ಉದ್ರಿಕ್ತರು ಪೊಲೀಸರ ಆಯುಧಗಳನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಪೊಲೀಸರ ಕೊಲೆ ಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.