


ಕಡಬ: ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಕಚೇರಿ ದಾಖಲಿಸಿರುವ ವನ್ಯಜೀವಿ ಅಪರಾಧ ವರದಿ (WLOR No.4/2025-26) ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸುಬ್ರಹ್ಮಣ್ಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಆರೋಪಿಸಲಾದ ಕಾಡುಕೋಣ ಬೇಟೆ ಪ್ರಕರಣದಲ್ಲಿ ಕಡಬ ತಾಲೂಕಿನ ಐವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು. ಬಂಧನದ ಭೀತಿಯಲ್ಲಿದ್ದ ಆರೋಪಿಗಳು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ಜಾಮೀನು ಪಡೆದವರು ಐತೂರು ಗ್ರಾಮದ ಕೊಂಡೆ ಮನೆ ನಿವಾಸಿಗಳಾದ ಭುವನೇಶ ಕೆ.(26), ಜೀವನ್(27), ಸಚಿನ್ ಕೆ.(28) ಹಾಗೂ ಮರ್ದಾಳ ನೆಕ್ಕಿಲಾಡಿ ಗ್ರಾಮದ ಜೈನ್ ವರ್ಕಿ(50) ಮತ್ತು ಜಸ್ಟಿನ್ ಜೈನ್ ಎಂದು ಗುರುತಿಸಲಾಗಿದೆ.
ನ್ಯಾಯಾಲಯವು ತಲಾ ₹50,000 ಬಾಂಡ್ ಹಾಗೂ ಒಬ್ಬ ಶೂರಿಟಿಯೊಂದಿಗೆ ಜಾಮೀನು ನೀಡಿ, 15 ದಿನಗಳಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವುದು, ತನಿಖೆ ಪೂರ್ಣಗೊಳ್ಳುವವರೆಗೆ ಪ್ರತಿ ಭಾನುವಾರ ಸಹಿ ಮಾಡುವುದು, ಸಾಕ್ಷಿಗಳಿಗೆ ಬೆದರಿಕೆ ಹಾಕದಿರುವುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ. ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದು ಆಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.








