





ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪವಿತ್ರ ಕೊಳದ ಬಳಿ ಬುದ್ಧನ ಅಪರೂಪದ ಶಿಲ್ಪ ಮತ್ತು ಗುಹೆಗಳ ಸಮುಚ್ಚಯವು ಪುರಾತತ್ವ ಆವಿಷ್ಕಾರದ ವೇಳೆ ಪತ್ತೆಯಾಗಿದೆ. ದೇವಸ್ಥಾನದ ಅಧಿಕಾರಿಗಳ ಅನುಮತಿಯೊಂದಿಗೆ ಇತ್ತೀಚೆಗೆ ನಡೆಸಿದ ಪರಿಶೋಧನೆಯಲ್ಲಿ ಈ ಆವಿಷ್ಕಾರ ಮಾಡಲಾಗಿದೆ.ಕೊಳದಲ್ಲಿ ಮುಳುಗಿದ್ದ ಸ್ಥಿತಿಯಲ್ಲಿ ದೊರೆತ ಈ ಶಿಲ್ಪವು, ಪದ್ಮಾಸನದಲ್ಲಿ (ಧ್ಯಾನ ಮುದ್ರೆ) ಕುಳಿತಿರುವ ಬುದ್ಧನನ್ನು ಚಿತ್ರಿಸುತ್ತದೆ.
ವಿಗ್ರಹದ ಬಲಗೈ ಸಂಪೂರ್ಣವಾಗಿ ಮುರಿದಿದ್ದು, ಎಡಗೈ ಅಡ್ಡಲಾಗಿ ಇಟ್ಟ ಕಾಲುಗಳ ನಡುವೆ ಇದೆ. ಭಾಗಶಃ ಕಾಣುವ ಉತ್ತರೀಯ (ಮೇಲು ಹೊದಿಕೆ) ಎಡ ಭುಜ ಮತ್ತು ಎದೆಗೆ ಆವರಿಸಿದೆ. ಶಿಲ್ಪದ ತಲೆ ಕಾಣೆಯಾಗಿದೆ.ಕದ್ರಿ ದೇವಸ್ಥಾನದ ಹೊರ ಆವರಣದಲ್ಲಿರುವ ಕಂಬಗಳ ಕೆಳ ಫಲಕಗಳಲ್ಲೂ ಪದ್ಮಾಸನದಲ್ಲಿ ಧ್ಯಾನಸ್ಥ ಬುದ್ಧನ ಶಿಲ್ಪಗಳನ್ನು ಕಾಣಬಹುದಾಗಿದೆ. ಹೀಗಾಗಿ ಆವಿಷ್ಕಾರದ ವೇಳೆ ದೊರೆತ ಶಿಲ್ಪವು ಬುದ್ಧನದ್ದೇ ಎಂದು ಹೇಳಲಾಗಿದೆ. ಈ ಪ್ರತಿಮೆಯು 68 ಸೆಂ.ಮೀ ಎತ್ತರ ಮತ್ತು 48 ಸೆಂ.ಮೀ ಅಗಲವಿದ್ದು, ಗೋವಾದ ಮುಷಿರಾ ವಾಡೋದಲ್ಲಿ ಪತ್ತೆಯಾದ ಶಿಲ್ಪವೊಂದನ್ನು ಹೋಲುತ್ತದೆ. ಈ ಶಿಲ್ಪವು ಕ್ರಿ.ಶ. 4ನೇ-6ನೇ ಶತಮಾನಕ್ಕೆ ಸೇರಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪದ್ಮಾಸನದ ಬುಡದಲ್ಲಿರುವ ಸಾಕೆಟ್, ಇದು ಒಮ್ಮೆ ಕದ್ರಿಯ ಮುಖ್ಯ ದೇವತೆಯಾಗಿರಬಹುದು ಎನ್ನಲಾಗಿದೆ.