ಉಡುಪಿ: ನೂರಾರು ಕೋಟಿ ಪಂಗನಾಮ ಹಾಕಿದ ಸಹಕಾರಿ ಬ್ಯಾಂಕ್ಗೆ ಗ್ರಾಹಕರು ಮುತ್ತಿಗೆ ಹಾಕಿದ ಘಟನೆ ಉಡುಪಿಯ ಕೃಷ್ಣಪುರ ಮಠ ಸಮೀಪ ನಡೆದಿದೆ. ನೂರಾರು ಕೋಟಿ ವಂಚಿಸಿದ ಕಮಲಾಕ್ಷಿ ವಿವಿಧೋದ್ದೇಶ ಬ್ಯಾಂಕ್ಗೆ ಮುತ್ತಿಗೆ ಹಾಕಿ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು ನೂರು ಕೋಟಿಗೂ ಅಧಿಕ ಠೇವಣಿ ಹಣ ಪಡೆದ ಬ್ಯಾಂಕ್ ಮುಖ್ಯಸ್ಥ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಖದೀಮ ಬ್ಯಾಂಕ್ ಮುಖ್ಯಸ್ಥನಿಗಾಗಿ ಬಲೆ ಬೀಸಿದ್ದಾರೆ. ಉಡುಪಿಯ ಕಮಲಾಕ್ಷಿ ವಿವಿಧೊದ್ದೇಶ ಬ್ಯಾಂಕ್ನಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿದೆ. ಉಡುಪಿಯ ಕೃಷ್ಣಾಪುರ ಮಠದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಗ್ರಾಹಕರು ಜೀವನ ಪರ್ಯಂತ ದುಡಿದ ಹಣವನ್ನು ಠೇವಣಿ ಇಟ್ಟಿದ್ದರು. ತಿಂಗಳಿಗೆ 12% ಬಡ್ಡಿಯಂತೆ ಠೇವಣಿಯನ್ನಾಗಿ ಇಟ್ಟಿದ್ದರು. ಠೇವಣಿ ಇಟ್ಟಾಗಿನಿಂದ ಕಳೆದ ಜೂನ್ ತಿಂಗಳವರೆಗೆ ಸಂಸ್ಥೆಯವರು ಸರಿಯಾಗಿ ಬಡ್ಡಿ ಪಾವತಿಸಿದ್ದಾರೆ. ಜೂನ್ ನಂತರ ಬಡ್ಡಿಯನ್ನು ಪಾವತಿಸಿಲ್ಲ ಎನ್ನುವುದು ಬಯಲಾಗಿದೆ. ಠೇವಣಿಯನ್ನು ಮರಳಿ ಕೊಡದೆ ಸತಾಯಿಸಿದ್ದಾರೆ ಎಂದು ಗ್ರಾಹಕರು ಬ್ಯಾಂಕ್ ವಿರುದ್ಧ ಕೆಂಡಕಾರುತ್ತಿದ್ದಾರೆ.
ಅಕ್ರೋಶಗೊಂಡ ಗ್ರಾಹಕರು ಬ್ಯಾಂಕ್ ಕಚೇರಿ ಮುಂದೆ ಜಮಾಯಿಸಿದ್ದರು. ಗ್ರಾಹಕರು ಬಂದರೂ ಸಹ ನಿಗದಿತ ಸಮಯಕ್ಕೆ ಕಚೇರಿಯನ್ನು ತೆರೆಯದೇ, ತಡವಾಗಿ ತೆರೆದಿದ್ದಾರೆ. ಈ ವೇಳೆ ಗ್ರಾಹಕರು ಕಚೇರಿ ಒಳಗೆ ನುಗ್ಗಿ ನ್ಯಾಯಕ್ಕಾಗಿ ಆಗ್ರಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮಹಿಳಾ ಸಿಬ್ಬಂದಿಯನ್ನು ಗ್ರಾಹಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಹಕರ ಒತ್ತಡದಿಂದ ನೊಂದ ಮಹಿಳಾ ಸಿಬ್ಬಂದಿ ಬ್ಯಾಗ್ನಲ್ಲಿದ್ದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಏಳೆಂಟು ಮಾತ್ರೆಗಳನ್ನು ನುಂಗಲು ಯತ್ನಿಸಿದಾಗ ಗ್ರಾಹಕರು ತಪ್ಪಿಸಲು ಯತ್ನಿಸಿದ್ದಾರೆ. ಬಳಿಕ ಸಿಬ್ಬಂದಿಗೆ ಬೈದು ಮಾತ್ರೆಗಳನ್ನು ಹೊರಹಾಕುವಂತೆ ತಾಕೀತು ಮಾಡಿದ್ದಾರೆ. ಸ್ಥಳಕ್ಕೆ ಉಡುಪಿ ನಗರ ಠಾಣೆ ಪೊಲೀಸರು ಆಗಮಿಸಿ ದೂರು ದಾಖಲಿಸಿಕೊಂಡಿದ್ದಾರೆ.