ಕಲಬುರಗಿ: ಪ್ರಿಯಕರನೊಂದಿಗೆ ಕೈಜೋಡಿಸಿದ ಪತ್ನಿ ತನ್ನ ಗಂಡನನ್ನೆ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರ್ನಾಪಲ್ಲಿಯಲ್ಲಿ ನಡೆದಿದೆ. ಕೊಲೆ ಮಾಡಿ ಕುಡಿದು ಸತ್ತಿದ್ದಾನೆ ಅಂತಾ ಹೆಂಡತಿ ಕತೆ ಕಟ್ಟಿದ್ದಳು. ಇನ್ನು ಕುಟುಂಬದವರೂ ಸಹ ಕುಡಿದು ಸತ್ತಿದ್ದಾನೆ ಅಂತಾ ನಂಬಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಅಂತ್ಯ ಸಂಸ್ಕಾರ ಆಗಿ ಎರಡು ತಿಂಗಳ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ.
ಕೊಲೆಯಾದ ವ್ಯಕ್ತಿ ರಾಜಪ್ಪ ರೆಡ್ಡಿ(38) ಎನ್ನಲಾಗಿದೆ. ಕೊಲೆ ಆರೋಪಿಗಳು ಪತ್ನಿ ಅನಸೂಯಾ ಪ್ರಿಯಕರ ಶ್ರೀಶೈಲ್ ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಗಂಡನ ಸಾವಿನ ಬಳಿಕ ಪ್ರಿಯಕರನೊಂದಿಗೆ ಸರಸವಾಡುವಾಗ ಹೆಂಡತಿ ಸಿಕ್ಕಿಬಿದ್ದಿದ್ದಾಳೆ. ಗ್ರಾಮಸ್ಥರು ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಥಳಿಸಿದಾಗ ಅಸಲಿ ಕಥೆ ಬಾಯಿಬಿಟ್ಟಿದ್ದಾನೆ. ರಾಜಪ್ಪ ರೆಡ್ಡಿ ಲಾಕ್ ಡೌನ್ ಸಂದರ್ಭ ತೆಲಂಗಾಣದ ಅಂತಾವರಂಗೆ ಪತ್ನಿಯ ಮೆನೆಗೆ ತೆರಳಿದ್ದ.
ಕೆಲ ತಿಂಗಳುಗಳ ಕಾಲ ಅಂತಾವರಂನಲ್ಲಿಯೇ ರಾಜಪ್ಪ ರೆಡ್ಡಿ ಉಳಿದಿದ್ದ. ಆಗ ಪತ್ನಿ ಅನುಸೂಯಾ ಪಕ್ಕದ ಮನೆಯ ಶ್ರೀಶೈಲ್ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ ತಕ್ಷಣ ರಾಜಪ್ಪರೆಡ್ಡಿ ತನ್ನ ಪತ್ನಿ ಅನುಸೂಯಾಳನ್ನು ತವರು ಮನೆಯಿಂದ ಕರೆದುಕೊಂಡು ಬಂದಿದ್ದ.
ಆದರೆ ಗಂಡನ ಮನೆಗೆ ಬಂದ ನಂತರವೂ ಪತ್ನಿಯ ಲವ್ವಿ ಡವ್ವಿ ಮುಂದುವರಿದಿದೆ. ಹೆಂಡತಿಯ ಲವ್ವಿ-ಡವ್ವಿಯಿಂದ ರಾಜಪ್ಪ ರೆಡ್ಡಿ ಬೆಸತ್ತಿದ್ದ. ಕುಡಿತದ ಚಟ ಹೊಂದಿದ್ದ ರಾಜಪ್ಪ ರೆಡ್ಡಿಗೆ ಪತ್ನಿ ಮತ್ತು ಪ್ರಿಯಕರ ಕಂಠ ಪೂರ್ತಿ ಕುಡಿಸಿ ಮಾತ್ರೆ ನೀಡಿದ್ದರು.
ಕುಡಿದು ಮಾತ್ರೆ ಸೇವಿಸಿದರೂ ರಾಜಪ್ಪ ರೆಡ್ಡಿ ಸಾಯಲಿಲ್ಲ. ಕೊನೆಗೆ ಆತನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಗಂಡನ ಕೊಲೆ ಮಾಡಿದ ಪತ್ನಿ ಅನುಸೂಯಾ ಮತ್ತು ಪ್ರಿಯಕರ ಶ್ರೀಶೈಲನನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.