ವಿಟ್ಲ : ರಾಷ್ಟ್ರೀಯ ಹೆದ್ದಾರಿ 75 ರ ಶೀಘ್ರ ದುರಸ್ಥಿಗೆ ಆಗ್ರಹಿಸಿ ಎಸ್.ಡಿ.ಪಿ.ಐ.ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಕಲ್ಲಡ್ಕದಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿತು.
ಎಸ್.ಡಿ.ಪಿ.ಐ.ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ ರಾ.ಹೆ.75ರ ಹಾಸನ – ಸಕಲೇಶಪುರ ಮತ್ತು ಗುಂಡ್ಯ – ಬಿ.ಸಿ.ರೋಡ್ ನಡುವಣ ಚತುಷ್ಪತ ಹೆದ್ದಾರಿ ಕಾಮಗಾರಿ ಅರ್ದದಲ್ಲೇ ಮೊಟಕಾಗಿದ್ದು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಾಣಿಯಿಂದ ಬಿ.ಸಿ.ರೋಡ್ ತನಕದ ರಸ್ತೆಯು ಗುಂಡಿ ಗಳಿಂದ ತುಂಬಿದ್ದು ಸಂಪೂರ್ಣ ಹದಗೆಟ್ಟಿದೆ.
ಮಾಣಿಯಿಂದ ಬಿ.ಸಿ.ರೋಡ್ ಗೆ ಸಂಚರಿಸಬೇಕಾದರೆ ಪ್ರಾಣವನ್ನೇ ಒತ್ತೆಯಿಟ್ಟು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ಪರಿಸ್ಥಿತಿ ಹೀಗಿದ್ದರೂ ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು, ಶಾಸಕರುಗಳು, ಸಂಭಂದಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನ ಸಾಮಾನ್ಯರ ಮೇಲೆ ಇವರಿಗಿರುವ ಕಾಳಜಿಯನ್ನು ಪ್ರಸ್ತುತ ಪಡಿಸುತ್ತದೆ ಎಂದರು.
ಎಸ್.ಡಿ.ಪಿ.ಐ.ಬಂಟ್ವಾಳ ವಿಧಾನ ಸಭಾ ಕ್ಷೇತ್ರಾದ್ಯಕ್ಷ ಖಲಂದರ್ ಪರ್ತಿಪ್ಪಾಡಿ ಮಾತನಾಡಿ ಶೀಘ್ರವೇ ರಸ್ತೆ ದುರಸ್ಥಿ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಿಎಫ್ಐ ವಿಟ್ಲ ಜಿಲ್ಲಾದ್ಯಕ್ಷ ಝಕರಿಯಾ ಗೋಳ್ತಮಜಲು, ಎಸ್.ಡಿ.ಪಿ.ಐ.ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯ ಶಾಕಿರ್ ಅಳಕೆಮಜಲು, ಕಲ್ಲಡ್ಕ ವಲಯಾದ್ಯಕ್ಷ ಜವಾಝ್ ಕಲ್ಲಡ್ಕ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು, ಪ್ರಮುಖರಾದ ಫೈಝಲ್ ಮಂಚಿ, ಸಿದ್ದೀಕ್ ಪನಾಮ,ಸತ್ತಾರ್ ಕಲ್ಲಡ್ಕ, ಯೂಸುಫ್ ಹೈದರ್, ಲತೀಫ್ ಕೊಡಾಜೆ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಂಟ್ವಾಳ ನಗರ ಠಾಣಾಧಿಕಾರಿ ಅವಿನಾಶ್ ಅವರ ಮುಖಾಂತರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.