ಬೆಂಗಳೂರು: ಕ್ರೈಂ ನಿಯಂತ್ರಣಕ್ಕೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ಹೆಜ್ಜೆ ಇಟ್ಟಿದ್ದಾರೆ. ನಗರದಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಸಿಸಿಬಿಯ ಸಂಘಟಿತ ಅಪರಾಧ ದಳ (OCW) ವನ್ನು ವಿಭಜಿಸಿ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಸಂಘಟಿತ ಅಪರಾಧ (ಆರ್ಗನೈಸ್ಡ್ ಕ್ರೈಂ ವಿಂಗ್) ದಳವನ್ನ, ಸಂಘಟಿತ ಅಪರಾಧ ದಳ ಪೂರ್ವ ಮತ್ತು ಸಂಘಟಿತ ಅಪರಾಧ ದಳ ಪಶ್ಚಿಮ ಎಂದು ವಿಭಾಗಿಸಲಾಗಿದೆ. ಪೂರ್ವ ವಿಭಾಗಕ್ಕೆ ಎಸಿಪಿ ಹೆಚ್.ಎಸ್ ಪರಮೇಶ್ವರ್ರನ್ನು ನೇಮಿಸಿದ್ದು, ಪಶ್ಚಿಮ ವಿಭಾಗಕ್ಕೆ ಎಸಿಪಿ ಎಚ್. ಧರ್ಮೇಂದ್ರ ರವರಿಗೆ ಉಸ್ತುವಾರಿ ನೀಡಲಾಗಿದೆ.
ಈ ಇಬ್ಬರು ಎಸಿಪಿಗಳು ಸಿಸಿಬಿಯ ಡಿಸಿಪಿ ಅಧೀನದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ರೌಡಿಸಂ ಮತ್ತಿತರ ಕ್ರೈಂ ಚಟುವಟಿಕೆಗಳಲ್ಲಿ ಇನ್ವಾಲ್ವ್ ಆಗಿರುವವರ ವಿರುದ್ಧ ಕಠಿಣ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು, ಅಪರಾಧಿಗಳು ಮತ್ತೆ ಕ್ರೈಂ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ನಿಯಂತ್ರಿಸುವುದಕ್ಕಾಗಿ ಸಹಾಯಕ ಪೊಲೀಸ್ ಆಯುಕ್ತರ ಉಸ್ತುವಾರಿಯಲ್ಲಿ ಸಂಘಟಿತ ಅಪರಾಧ ದಳ ಕಾರ್ಯನಿರ್ವಹಿಸಲಿದೆ.
ಸಿಲಿಕಾನ್ ಸಿಟಿಯಲ್ಲಿ ಅಪರಾಧ ಕೃತ್ಯಗಳು ದಿನೇ ದಿನೇ ಹೆಚ್ಚುತ್ತಿರುವ ನಿಟ್ಟಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಇವನ್ನೆಲ್ಲ ಮಟ್ಟ ಹಾಕಲು ಕಮಲ್ ಪಂತ್ ಈ ಕ್ರಮ ಕೈಗೊಂಡಿದ್ದಾರೆ.