ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮಗುವಿನ ಗಂಟಲಲ್ಲಿ ಶೇಂಗಾ ಬೀಜ ಸಿಲುಕಿ ಉಸಿರುಗಟ್ಟಿ ಮೃತಪಟ್ಟ ಸಮಯದಲ್ಲಿ ಆತನ ಅಜ್ಜಿ ಗಣಪತಿ ದೇವಸ್ಥಾನಕ್ಕೆ ತೆರಳಿ, ಮಗುವಿನ ಮೃತದೇಹವಿಟ್ಟು, ಬದುಕಿಸುವಂತೆ ಪ್ರಾರ್ಥಿಸಿದ ಘಟನೆ ನಡೆದಿದೆ.
ಯಲ್ಲಾಪುರದ ಗಣಪತಿ ಗಲ್ಲಿಯ ದೇವಸ್ಥಾನದಲ್ಲಿ ಈ ಮನಕಲಕುವ ಘಟನೆ ನಡೆದಿದೆ. ಮಗು ಸಾವನ್ನಪ್ಪಿದ ತಕ್ಷಣ ದಿಕ್ಕೇ ತೋಚದ ಮಗುವಿನ ಅಜ್ಜಿ, ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿ , ದೇವಸ್ಥಾನದ ಗಂಟೆ ಭಾರಿಸಿ ಪ್ರಾರ್ಥಿಸಿದರು.
ಯಲ್ಲಾಪುರದ ರಾಮನಾಥ ಆಚಾರಿ ಅವರ ಎರಡೂವರೆ ವರ್ಷದ ಸಾತ್ವಿಕ್ ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ. ಎರಡೂವರೆ ವರ್ಷದ ಬಾಲಕ ಸಾತ್ವಿಕ್ ಮನೆಯಲ್ಲಿ ಸಂಜೆ ಶೇಂಗಾ ಬೀಜ ತಿನ್ನುತ್ತಿದ್ದಾಗ ಅಚಾನಕ್ ಆಗಿ ಗಂಟಲಲ್ಲಿ ಸಿಲುಕಿಕೊಂಡು, ಉಸಿರಾಡಲು ತೊಂದರೆ ಪಡುತ್ತಿದ್ದ ಮಗು ಕಂಡು ಮನೆಯವರು ತಕ್ಷಣ, ಗಂಟಲಿನಿಂದ ಶೇಂಗಾ ಬೀಜಗಳನ್ನು ಹೊರ ತೆಗೆದಿದ್ದು, ಆದರೆ ಉಸಿರಾಟ ಸುಧಾರಿಸದ ಕಾರಣ ಪಟ್ಟಣದ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವೈದ್ಯರು ಗಂಟಲಲ್ಲಿದ್ದ ಮತ್ತೊಂದು ಶೇಂಗಾ ಬೀಜವನ್ನು ಹೊರತೆಗೆದಿದ್ದು, ಅಷ್ಟರಲ್ಲಿ ಮಗುವಿನ ಉಸಿರು ನಿಂತಿತ್ತು. ವೈದ್ಯರು ಮಗು ಮೃತಪಟ್ಟಿದೆ ಎಂದು ದೃಢಪಡಿಸಿದ್ದು, ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಭಾವುಕರಾದ ಅಜ್ಜಿ ಮೊಮ್ಮಗನ ಶವ ಹೊತ್ತು ದೇವಸ್ಥಾನಕ್ಕೆ ಕೊಂಡೊಯ್ದ ಈ ಸನ್ನಿವೇಶ ಸುತ್ತಲ ಜನರಲ್ಲಿ ಭಾವುಕ ದೃಶ್ಯ ಸೃಷ್ಟಿಸಿತು. ಜನರು ಮಗುವಿನ ಸಾವಿಗೆ ಮರುಗಿದರು.