




ಕಾರ್ಕಳ: ಗುಂಡು ಹಾರಿಸಿಕೊಂಡು ಉದ್ಯಮಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಾರ್ಕಳದ ಉದ್ಯಮಿ ದಿಲೀಪ್ ಎನ್.ಆರ್ ಎಂದು ಗುರುತಿಸಲಾಗಿದೆ.
ದಿಲೀಪ್ ಎನ್.ಆರ್ ಅವರು ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು ಮಂಗಳವಾರ ನಸುಕಿನ ಜಾವ ಕಾರ್ಕಳದ ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿಯ ಎಸ್ಟೇಟ್ ಮುಂಭಾಗ ಕಾರು ನಿಲ್ಲಿಸಿ ಕಾರಿನೊಳಗೆ ಕುಳಿತು ಸ್ವಯಂ ತಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಉದ್ಯಮ ನಷ್ಟ ಹಾಗೂ ವಿಪರೀತ ಸಾಲ ಆತ್ಮಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಕೆಲ ವರ್ಷಗಳಿಂದ ಕುಟುಂಬದ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದರು.
ಕಾರಿನಲ್ಲಿ ಸ್ವೀಟ್ ಬಾಕ್ಸ್, ರಿವಾಲ್ವರ್ ಪತ್ತೆಯಾಗಿದ್ದು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿಲೀಪ್ ಅವರು ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷ ಸುಭೀತ್ ಎನ್.ಆರ್ ಅವರ ಸಹೋದರ.