ಕಾರ್ಕಳ : ರಬ್ಬರ್ ಪ್ಲಾಂಟೇಷನ್ ನಲ್ಲಿ ಟ್ಯಾಪರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೃತದೇಹ ಅನುಮನಾಸ್ಪದ ರೀತಿಯಲ್ಲಿ ಸುಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಸಾಣೂರು ಗ್ರಾಮದ ಶುಂಟಿಗುಡ್ಡೆ ಎಂಬಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಮೃತರ ಪತ್ನಿ ಸುಧಾ ಕೆ.ಎಸ್ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಶಂಕೆ ವ್ಯಕ್ತಪಡಿಸಿ ಪ್ಲಾಂಟೇಷನ್ನ ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ.
ಅದರಂತೆ ಕೇರಳ ಮೂಲದ ಟಿ.ಕೆ. ಗೋಪಿನಾಥನ್ ನಾಯರ್ ರವರನ್ನು 2022 ರ ಜೂನ್ ತಿಂಗಳಿನಲ್ಲಿ ಅಪಾದಿತರಾದ ಆರ್ ವಿವೇಕಾನಂದ ಶೆಣೈ ಮತ್ತು ದಿಲೀಪ್ ಜಿ ಎಂಬವರು ಕಾರ್ಕಳದ ಸಾಣೂರು ಗ್ರಾಮದ ಶುಂಟಿಗುಡ್ಡೆ ಎಂಬಲ್ಲಿರುವ ರಬ್ಬರ್ ಪ್ಲಾಂಟೇಷನ್ ನಲ್ಲಿ ಟ್ಯಾಪರ್ ಕೆಲಸಕ್ಕೆ ನೇಮಕ ಮಾಡಿ ಅಲ್ಲಿಯೇ ಗುಡಿಸಲಿನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದರು. ಆದರೆ ಅಪಾದಿತರಾದ ಆರ್ ವಿವೇಕಾನಂದ ಶೆಣೈ, ದಿಲೀಪ್ ಜಿ, ಮತ್ತಿ ಇತರರೊಬ್ಬರು ಟಿ.ಕೆ ಗೋಪಿನಾಥನ್ ನಾಯರ್ ಅವರಿಗೆ ಸರಿಯಾಗಿ ಸಂಬಳವನ್ನು ನೀಡದೇ, ಅಗತ್ಯವಿದ್ದಾಗ ರಜೆಯನ್ನು ನೀಡದೇ ತೊಂದರೆ ನೀಡುತ್ತಿದ್ದರು ಮಾತ್ರವಲ್ಲದೆ ಕೆಲಸವನ್ನು ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.
ಹಾಗೂ ಟಿ.ಕೆ ಗೋಪಿನಾಥನ್ ನಾಯರ್ ಅವರು ತಮ್ಮ ಪತ್ನಿ ಸುಧಾ ಕೆ.ಎಸ್ ರವರಿಗೆ ಕರೆ ಮಾಡಿ ತಾನು ಒಬ್ಬನೇ ಇಲ್ಲಿ ಇದ್ದು ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಅಪಾದಿತರ ಕಿರುಕುಳದಿಂದ ಬಿಟ್ಟುಹೋಗಿರುತ್ತಾರೆ. ಕೆಲವು ದಿನಗಳ ಹಿಂದೆ ಕೇರಳದಿಂದ ಕೆಲಸಕ್ಕೆಂದು ಬಂದವರೊಬ್ಬರು ಅಪಾದಿತರ ಕಿರುಕುಳದಿಂದ ತಾನು ಇಲ್ಲಿ ಇರುವುದಿಲ್ಲ ಒಂದೆರಡು ದಿನಗಳಲ್ಲಿ ಬಿಟ್ಟುಹೋಗುತ್ತೇನೆಂದು ಹೇಳುತ್ತಿದ್ದ ಬಗ್ಗೆ ತಿಳಿಸಿದ್ದರು. ಮಾತ್ರವಲ್ಲದೆ ಇದರಿಂದ ಹೆದರಿದ ಟಿ.ಕೆ ಗೋಪಿನಾಥನ್ ನಾಯರ್ ಅವರು ಅ.17 ರಂದು ವಾಯ್ಸ್ ಮೆಸೇಜ್ಗಳನ್ನು ಕಳುಹಿಸಿ 2-3 ಮೊಬೈಲ್ ನಂಬರ್ಗಳನ್ನು ಕಳುಹಿಸುತ್ತೇನೆ ಇವುಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಂಡು ಸಂಜೆಯ ಸಮಯ ತಾನು ಫೋನ್ ಕರೆ ಸ್ವೀಕರಿಸದಿದ್ದರೆ ಈ ನಂಬರ್ಗಳನ್ನು ಪೋಲೀಸರಿಗೆ ತಿಳಿಸಿ ದೂರು ನೀಡುವಂತೆ ತಿಳಿಸಿದ್ದರು. ಈ ನಡುವೆ ಅ.19 ರಂದು ಅಪಾದಿತ ದಿಲೀಪ್ ಫೋನ್ ಮಾಡಿ, ಟಿ.ಕೆ ಗೋಪಿನಾಥನ್ ನಾಯರ್ ಅವರು ಕಾಣಿಸುತ್ತಿಲ್ಲ ಮಿಸ್ಸಿಂಗ್ ದೂರು ನೀಡಲು ಅವರ ಆಧಾರ್ ಕಾರ್ಡ್ ಕಳುಹಿಸುವಂತೆ ತಿಳಿಸಿದ್ದರು. ಆದರೆ ಬಳಿಕ ಗೋಪಿನಾಥನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿರುತ್ತದೆ, ಕೂಡಲೇ ಅವರ ಗೋಪಿನಾಥನ್ ಅವರ ಮಗ ಸ್ಥಳಕ್ಕೆ ಬಂದು ನೋಡಿದಾಗ ಗೋಪಿನಾಥನ್ ಅವರು ಎಸ್ಟೇಟ್ನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತಪಟ್ಟಿರುವುದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹಾಗೂ ತಮ್ಮ ಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವದವರಲ್ಲ ಅವರಿಗೆ ಆರೋಪಿಗಳು ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.