


ಕಾರ್ಕಳ: ಬೆಳಗಿನ ಜಾವ 4.50ರ ಸುಮಾರಿಗೆ ಎರಡು ಮನೆಗಳಲ್ಲಿ ದಾಳಿ ನಡೆಸಿದ ಉಡುಪಿ ಅಬಕಾರಿ ಪೊಲೀಸರು ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಗೋವಾ ಮದ್ಯವನ್ನು ವಶಪಡಿಸಿಕೊಂಡ ಘಟನೆ ಬೋಳ ಗ್ರಾಮದ ಅಬ್ಯನಡ್ಕ ಎಂಬಲ್ಲಿ ನಡೆದಿದೆ.
ಅವಿನಾಶ್ ಮಲ್ಲಿ ಎಂಬವರಿಗೆ ಸೇರಿದ ಅವನಿ ನಿಲಯ ಎಂಬ ಮನೆಗೆ ಹಾಗೂ ಅದೇ ಗ್ರಾಮದ ಮರಿಮಾರು ಗುತ್ತು ಎಂಬ ಮನೆಗೆ ಏಕಕಾಲದಲ್ಲಿ ದಾಳಿ ನಡೆಸಿದ ಅಬಕಾರಿ ಪೊಲೀಸರು, ಅಕ್ರಮವಾಗಿ ದಾಸ್ತಾನು ಇರಿಸಿದ 272 ಪೆಟ್ಟಿಗೆಗಳಲ್ಲಿ ಒಟ್ಟು 2360.850 ಲೀಟರ್ ವಿವಿಧ ಬ್ರಾಂಡ್ಗಳ ಗೋವಾ ಮದ್ಯ ಪತ್ತೆ ಹಚ್ಚಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಈ ವೇಳೆ ಆರೋಪಿಗಳಾದ ಆದಿ ಉಡುಪಿಯ ಪ್ರಶಾಂತ್ ಸುವರ್ಣ ಮತ್ತು ಅಭ್ಯನಡ್ಕದ ಅವಿನಾಶ್ ಮಲ್ಲಿ ಓಡಿ ತಲೆ ಮರೆಸಿಕೊಂಡಿದ್ದಾರೆ. ಇವರಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ವಶಪಡಿಸಿಕೊಂಡ ಗೋವಾ ಮದ್ಯದ ಒಟ್ಟು ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಜಾರಿ ಮತ್ತು ತನಿಖೆ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ.ಸಿ.ಎಚ್.ಬಾಲಕೃಷ್ಣ ನಿರ್ದೇಶನದ ಮೇರೆಗೆ ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಬಿಂದುಶ್ರೀ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯ ನೇತೃತ್ವವನ್ನು ಉಡುಪಿ ಜಿಲ್ಲಾ ಅಬಕಾರಿ ಅಧೀಕ್ಷಕ ಶಿವಪ್ರಸಾದ್ ವಹಿಸಿದ್ದರು.
ಪ್ರಕರಣವನ್ನು ಕ್ರಮವಾಗಿ ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಗುರುಮೂರ್ತಿ ಡಿ.ಪಾಲೇಕರ್ ಹಾಗೂ ಉಡುಪಿ ಜಿಲ್ಲಾ ತಂಡದ ಅಬಕಾರಿ ಉಪ ನಿರೀಕ್ಷಕ ರಾಘವೇಂದ್ರ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಜ್ಯೋತಿ, ಮಿಲ್ಲರ್ ಡಿಸೋಜ, ಉಪ ನಿರೀಕ್ಷಕರಾದ ಕೃಷ್ಣ ನಿತ್ಯಾನಂದ, ಶಿವಶಂಕರ, ದಿವಾಕರ, ಚಂದ್ರ ಮೊಗವೀರ ಹಾಗೂ ಸಿಬ್ಬಂದಿ ಚಂದ್ರಶೇಖರ ಪಾಟೀಲ, ನಿರ್ಮಲ ನಾಯಕ್, ಶಂಕರಾ ನಂದ, ನಂಜುಂಡಸ್ವಾಮಿ, ಪ್ರಹ್ಲಾದ, ರಾಜಶೇಖರ, ಖಾಜ ಮೈನುಸಾಬ್, ತಿಪ್ಪಣ್ಣ ಹೊಸಮನಿ, ಕೃಷ್ಣ ಆಚಾರಿ, ಮಹಾಂತೇಶ್ ಹಾಗೂ ವಾಹನ ಚಾಲಕರಾದ ದಿನೇಶ್, ವೆಂಕಟರಮಣ ಗೊಲ್ಲ, ಪುದೀಪ, ಸುಧಾಕರ ಭಾಗವಹಿಸಿದ್ದಾರೆ.