ಉಡುಪಿ: ಶಾಲೆಯಿಂದ ಮನೆಗೆ ಹಿಂದುರುಗುತ್ತಿದ್ದ ವೇಳೆ ಮರದ ಕಾಲುಸಂಕದಿಂದ ಜಾರಿ ನೀರುಪಾಲಾಗಿದ್ದ 7ರ ಬಾಲಕಿಯ ಮೃತದೇಹ ಎರಡು ದಿನಗಳಾದರೂ ಪತ್ತೆಯಾಗಿಲ್ಲ.
ಕಳೆದ ಸೋಮವಾರ ಬೈಂದೂರಿನ ಕಾಲ್ತೋಡಿನಲ್ಲಿ ಶಾಲೆಯಿಂದ ಹಿಂತಿರುಗುತ್ತಿದ್ದ ವೇಳೆ ಮರದ ಕಾಲುಸಂಕದಿಂದ ಜಾರಿ ನೀರುಪಾಲಾಗಿದ್ದ 7ರ ಬಾಲಕಿಯ ಮೃತದೇಹ ಎರಡು ದಿನಗಳಾದರೂ ಪತ್ತೆಯಾಗಿಲ್ಲ. ಘಟನೆ ನಡೆದ ತಕ್ಷಣ ಅಗ್ನಿಶಾಮಕದಳ ಹಾಗೂ ಗ್ರಾಮಸ್ಥರಿಂದ ಸತತ ಎರಡು ದಿನಗಳಿಂದ ಹುಡುಕಾಟ ನಡೆಸುತ್ತಿದ್ದರೂ ಮೃತದೇಹ ಪತ್ತೆಯಾಗಿಲ್ಲ. ಸದ್ಯ ಶೋಧ ಮುಂದುವರೆದಿದೆ.
ಆ.8 ರಂದು ಮಧ್ಯಾಹ್ನ ಮೂರು ಗಂಟೆ ವೇಳೆಗೆ ಬೈಂದೂರಿನ ಕಾಲ್ತೋಡುವಿನ ಚಪ್ಪರಿಕೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿ ಕಲಿಯುತ್ತಿದ್ದ 7 ರ ಹರೆಯದ ಸನ್ನಿಧಿ ಇತರ ಮೂರು ವಿದ್ಯಾರ್ಥಿಗಳೊಂದಿಗೆ ಮರದ ಕಾಲು ಸಂಕ ದಾಟುತ್ತಿದ್ದಳು. ಈ ವೇಳೆ ಕಾಲು ಜಾರಿ ಹೊಳೆಗೆ ಬಿದ್ದಿದ್ದಾಳೆ. ತಕ್ಷಣ ಉಳಿದ ವಿದ್ಯಾರ್ಥಿಗಳು ಊರವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದಾಗ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಳು. ಸದ್ಯ ಎರಡು ದಿನಗಳಿಂದ ಅಗ್ನಿಶಾಮಕ ದಳ, ಈಜುಪಟು, ಮುಳುಗುತಜ್ಞರು ಹಾಗೂ ಗ್ರಾಮಸ್ಥರಿಂದ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಸನ್ನಿಧಿಯ ಮನೆಯಲ್ಲಿ ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.