






ಕಾಸರಗೋಡು: ಮಂಜೇಶ್ವರ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿ ಪರಾರಿಯಾಗಿದ್ದ ವಾರಂಟ್ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಹೊಸಬೆಟ್ಟುವಿನ ಸಿದ್ದೀಕ್ ಸಾರಿಕ್ ಫರ್ಹಾನ್ (29) ಎಂದು ಗುರುತಿಸಲಾಗಿದೆ.
ಸೋಮವಾರ ಮುಂಜಾನೆ ಲಾಕಪ್ ನಿಂದ ಈತ ಪರಾರಿಯಾಗಿದ್ದನು. ಆರೋಪಿ ಮುಂಬೈಗೆ ಪರಾರಿಯಾಗಿರುವುದಾಗಿ ಪ್ರಚಾರವಾಗಿತ್ತು. ಆದರೆ ಪೊಲೀಸರು ಮಂಜೇಶ್ವರ ಪರಿಸರದಲ್ಲೇ ಇರುವ ಬಗ್ಗೆ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಿದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಡಿಯಲು ನೀರು ಕೇಳಿದಾಗ ಪೊಲೀಸರು ಒಳಗೆ ತೆರಳಿ ನೀರು ತರುವಷ್ಟರಲ್ಲಿ ಈತ ಲಾಕಪ್ ನಿಂದ ಪರಾರಿಯಾಗಿದ್ದನು.
2019 ರ ಮೇ 25 ರಂದು ಕುಂಜತ್ತೂರು ತೂಮಿನಾಡು ಎಂಬಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದ ಆರೋಪಿಯಾಗಿದ್ದಾನೆ. ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ರವರ ಗೆಲುವಿನ ವಿಜಯೋತ್ಸವ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು, ಈ ಸಂದರ್ಭದಲ್ಲಿ ಈತ ಪೊಲೀಸರತ್ತ ಕಲ್ಲೆಸೆದಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಿಂಸೆಗೆ ಪ್ರಚೋದನೆ ನೀಡಿದ್ದಾಗಿ ಪ್ರಕರಣ ದಾಖಲಿಸಲಾಗಿತ್ತು. ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.








