ಕಾಸರಗೋಡು: ಇಲ್ಲಿನ ಬಹುಪ್ರಸಿದ್ದ ಅನಂತಪುರದ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಸರೋವರದಲ್ಲಿ ಬಬಿಯಾ ಮೊಸಳೆಯ ನಿಧನದ ಬಳಿಕ ಮರಿಮೊಸಳೆ ಪ್ರತ್ಯಕ್ಷವಾಗಿದ್ದು ಆ ಪ್ರಯುಕ್ತ ಕ್ಷೇತ್ರ ಅನಂತಪುರದಲ್ಲಿ ನ. 17ರಂದು ಮಕರ ಸಂಭ್ರಮ ಕಾರ್ಯಕ್ರಮ ಜರಗಲಿದೆ.
ಬೆಳಿಗ್ಗೆ ಗಂಟೆ 10ಕ್ಕೆ ಕ್ಷೇತ್ರದ ಸಭಾಂಗಣದಲ್ಲಿ ಮಕರ ಸಂಭ್ರಮ ಕಾರ್ಯಕ್ರಮ ಜರಗಲಿದ್ದು, ಮಧ್ಯಾಹ್ನ 2.30ಕ್ಕೆ ಭಕ್ತರ ಸಮಾಲೋಚನಾ ಸಭೆ ನಡೆಯಲಿದೆ ಎಂದು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ರಾಮನಾಥ್ ಶೆಟ್ಟಿ ತಿಳಿಸಿದ್ದಾರೆ.
ದೇವಸ್ಥಾನದ ಸರೋವರದಲ್ಲಿರುವ ಗುಹೆಯಲ್ಲಿ ಮೊಸಳೆ ಪ್ರತ್ಯಕ್ಷವಾದ ಬಳಿಕ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಅನ್ಯರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿದ್ದಾರೆ. ಮೊಸಳೆಯ ದರ್ಶನಕ್ಕಾಗಿ ಸರೋವರದ ತಟದಲ್ಲಿ ಸಂಜೆ ತನಕ ಕಾಯುವುದೂ ಕಂಡುಬರುತ್ತಿದೆ. ನಿತ್ಯ ಭಕ್ತರಿಗೆ ಮೊಸಳೆಯ ದರ್ಶನವಾಗುತ್ತಿದೆ. ಆಗಾಗ ಕೊಳದ ಮೆಟ್ಟಿಲಿನಲ್ಲಿ ಅಲ್ಪ ಹೊತ್ತು ಕಾಣಿಸಿಕೊಳ್ಳುವ ಮೊಸಳೆ ಬಳಿಕ ಗುಹೆಗೆ ಮರಳುತ್ತಿದೆ ಎಂದು ಎಂ.ಪಿ. ರಾಮನಾಥ್ ಶೆಟ್ಟಿ ತಿಳಿಸಿದ್ದಾರೆ.
ದೇವಳದ ತಂತ್ರಿಗಳು ಮತ್ತು ಆಡಳಿತ ಮಂಡಳಿಯವರು ಸೇರಿ ಮೊಸಳೆಗೆ ನಾಮಕರಣ, ನೈವೇದ್ಯ ಮುಂತಾದವುಗಳನ್ನು ನಿರ್ಧರಿಸಲಿದ್ದಾರೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಎಂ.ವಿ. ಮಹಾಲಿಂಗೇಶ್ವರ ಭಟ್ ತಿಳಿಸಿದ್ದಾರೆ.