



ಕಟೀಲು: ಸಂಶಯಾಸ್ಪದ ರೀತಿಯಲ್ಲಿ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದ ಘಟನೆ ಕಟೀಲು ಸಮೀಪದ ಗಿಡಿಗೆರಯಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಕಟೀಲು ಕೊಂಡೆಮೂಲ ನಿವಾಸಿ ತಾರನಾಥ (40) ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ವೇಳೆಗೆ ಕುಡಿತದ ವಿಷಯವಾಗಿ ಮನೆಯಲ್ಲಿ ಮಾತಿನ ಚಕಮಕಿ ನಡೆದಿದ್ದು. ಬಳಿಕ ತಾರನಾಥ ಮನೆಯಿಂದ ತೆರಳಿದ್ದು ಭಾನುವಾರ ಬೆಳಗ್ಗಿನವರೆಗೂ ಮನೆಗೆ ವಾಪಾಸು ಬಂದಿರಲಿಲ್ಲ.
ತಾರನಾಥ್ಗಾಗಿ ಹುಡುಕಾಡಿದಾಗ ಬೆಳಗ್ಗೆ ಸುಮಾರು 7:30ರ ವೇಳೆಗೆ ಮನೆಯಿಂದ ಸುಮಾರು 100ಮೀ. ದೂರದಲ್ಲಿ ನೀರಿನ ಟ್ಯಾಂಕ್ ಪಕ್ಕದಲ್ಲಿ ಕೇಬಲ್ನಿಂದ ಕುತ್ತಿಗೆಗೆ ಬಿಗಿದುಕೊಂಡ ರೀತಿಯಲ್ಲಿ ತಾರನಾಥನ ಮೃತದೇಹ ಪತ್ತೆಯಾಗಿದೆ.
ವಿವಾಹಿತನಾಗಿದ್ದ ತಾರನಾಥನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈ ಹಿಂದೆ ಮೇಸ್ತ್ರಿ ಕೆಲಸಕ್ಕೆ ಮಾಡುತ್ತಿದ್ದು ಇತ್ತೀಚೆಗೆ ಹೆಚ್ಚಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಬಜಪೆ ಪೊಲೀಸರು ಇನ್ಸ್ ಪೆಕ್ಟರ್ ಸಂದೀಪ್ ಜಿ.ಎಸ್. ಅವರ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಘಟನೆಯ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಶ್ರೀಕಾಂತ್, ಬಜಪೆ ಇನ್ಸ್ ಪೆಕ್ಟರ್ ಸಂದೀಪ್ ಅವರನ್ನೊಳಗೊಂಡ ಪೊಲೀಸರ ತಂಡ, ಫೋರೆನ್ಸಿಕ್, ಬೆರಳಚ್ಚು, ಶ್ವಾನ ದಳ ತನಿಖಾ ತಂಡಗಳು ಘಟನಾ ಸ್ಥಳದಲ್ಲಿ ಪರೀಲನೆ ನಡೆಸಿದ್ದಾರೆ. ಮೃತದೇಹದ ಮರಣೋತ್ತರ ಶವಪರೀಕ್ಷೆ ಹಾಗೂ ತನಿಖಾ ತಂಡಗಳ ವರದಿಯ ಬಳಿಕವಷ್ಟೇ ಘಟನೆಯ ಖಚಿತತೆ ಸಿಗಬಹುದು ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.