ಬಂಟ್ವಾಳ(ನ.9): ಕೆದಿಲ ಗ್ರಾಮದ ಸತ್ತಿಕಲ್ಲು ಎಂಬಲ್ಲಿ ಹಲವು ಸಮಯಗಳಿಂದ ಪೋಲೀಸರ ಕಣ್ಣು ತಪ್ಪಿಸಿ ಅಕ್ರಮ ಗೋ ಸಾಗಾಟ ಹಾಗೂ ಕಸಾಯಿಖಾನೆ ನಡೆಯುತ್ತಿದೆ ಎಂಬ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ನಿಖರ ಮಾಹಿತಿಯ ಮೇರೆಗೆ ಪುತ್ತೂರು ನಗರ ಫೋಲೀಸ್ ಠಾಣಾ ಎಸ್ಐ ಶ್ರೀ ಝಂಬು ರಾಜ್ ಮಾಜನ್ ಹಾಗು ತಂಡ ದಾಳಿ ನಡೆಸಿದೆ.
ಈ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದು ಅಕ್ರಮವಾಗಿ ಕಟ್ಟಲ್ಪಟ್ಟ 3 ಹೋರಿ ಕರುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.ಆರೋಪಿಗಳನ್ನು ಆದಷ್ಟು ಶೀಘ್ರವಾಗಿ ಬಂಧಿಸುವಂತೆ ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಗಣೇಶ ಕುಲಾಲ್ ಕೆದಿಲ ಒತ್ತಾಯಿಸಿದ್ದಾರೆ. ಕೆದಿಲ ಗ್ರಾಮದ ಸತ್ತಿಕಲ್ಲು, ಸರೋಳಿ, ಗಡಿಯಾರ ಮುಂತಾದೆಡೆ ಅವ್ಯಾಹತವಾಗಿ ಅಕ್ರಮ ಕಸಾಯಿಖಾನೆ ಹಾಗೂ ಅಕ್ರಮ ಗೋಸಾಗಾಟಗಳು ನಡೆಯುತ್ತಿದೆ.
ಪೋಲೀಸರ ಕಣ್ಣು ತಪ್ಪಿಸಿ ಹಲವಷ್ಟು ವರುಷಗಳಿಂದ ಈ ಕೃತ್ಯ ನಡೆಯುತ್ತಲೇ ಇದೆ ಅಲ್ಲೊಂದು ಇಲ್ಲೊಂದು ಎಂಬಂತೆ ಪ್ರಕರಣಗಳು ಪತ್ತೆಯಾದರೂ ಕಾನೂನಿನ ಅಸಹಕಾರದಿಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಜಾಮೀನಿನ ಮೂಲಕ ಬಿಡುಗಡೆ ಗೊಂಡು ಮತ್ತೆ ಅದೇ ಕೆಲಸದಲ್ಲಿ ತೊಡಗುತ್ತಿದ್ದಾರೆ. ಹಲವು ವರುಷಗಳಿಂದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಈ ಅಕ್ರಮಗಳ ಮಾಹಿತಿ ನೀಡಿ ಪೋಲೀಸರಿಗೆ ಸಹಕರಿಸುತ್ತಿದೆ. ಕಾನೂನು ಅಸಹಕಾರ ಆರೋಪಿಗಳನ್ನು ಪೋಷಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ನೋವು ತೋಡಿಕೊಂಡಿದ್ದಾರೆ.