


ಶೀಘ್ರವೇ ಮುಂಜಾಗೃತ ಕ್ರಮ ಕೈಗೊಳ್ಳಬೇಕು: ಮೆಸ್ಕಾಂ ಹಾಗೂ ಅರಣ್ಯಾಧಿಕಾರಿಗಳಿಗೆ ಕಲ್ಮಲೆ ಜನತೆ ಮನವಿ
ವೀರಕಂಭ: ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಅಲ್ಲಲ್ಲಿ ಗುಡ್ಡಕುಸಿತ, ವಿದ್ಯುತ್ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿದೆ. ಈ ನಡುವೆ ಬಂಟ್ವಾಳ ವೀರಕಂಭ ಗ್ರಾಮದ ಕೆಲಿಂಜ, ಕಲ್ಮಲೆ ಎಂಬಲ್ಲಿ ಹೈಪವರ್ ವಿದ್ಯುತ್ ತಂತಿಗೆ ಮರದ ಬಳ್ಳಿಗಳು ಸುತ್ತಿಕೊಂಡು ಅಪಾಯದಲ್ಲಿ ಸಿಲುಕಿರುವ ದೃಶ್ಯ ಬೆಳಕಿಗೆ ಬಂದಿದೆ. ಇದರಿಂದ ಕಲ್ಮಲೆ ಪರಿಸರದ ನಾಗರಿಕರು ಜೋರಾಗಿ ಬೀಸುವ ಗಾಳಿ ಮಳೆಗೆ ಭಯಭೀತರಾಗಿ ದಿನ ಕಳೆಯುವ ಸ್ಥಿತಿ ಎದುರಾಗಿದೆ.
ಈ ಬಗ್ಗೆ ಈ ಹಿಂದೆ ಕಲ್ಮಲೆ ಪರಿಸರದ ನಾಗರಿಕರು ಮೆಸ್ಕಾಂ ಅಧಿಕಾರಿಗಳ ಹಾಗೂ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿರುತ್ತಾರೆ. ಆದರೆ ಈ ಬಗ್ಗೆ ಮೆಸ್ಕಾಂ ಇಲಾಖೆ ಮತ್ತು ಅರಣ್ಯ ಇಲಾಖೆ ಯಾವುದೇ ಮುಂಜಾಗೃತ ಕ್ರಮಗಳ ಬಗ್ಗೆ ಗಮನಹರಿಸಿಲ್ಲ ಎಂದು ಕಲ್ಲಲೆ ಪರಿಸರದ ನಾಗರಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈಪವರ್ ವಿದ್ಯುತ್ ತಂತಿಗಳಿಗೆ ಮರದ ಬಳ್ಳಿಗಳು ಸುತ್ತಿಕೊಂಡು ಮುಂದಿನ ಯಾವ ಘಳಿಗೆಯಲ್ಲಿ ಬೇಕಾದರೂ ಅನಾಹುತ ಸಂಭವಿಸಬಹುದು. ಆದರಿಂದ ಈ ಬಗ್ಗೆ ಮೆಸ್ಕಾಂ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಆದಷ್ಟು ಬೇಗನೆ ಗಮನಹರಿಸಿ, ಮುಂದೆ ನಡೆಯುವ ಅನಾಹುತಗಳ ದಾರಿ ತಪ್ಪಿಸಿ, ಶೀಫ್ರವೇ ಪರಿಹಾರ ಕಲ್ಪಿಸಿಕೊಡುವಂತೆ ಕಲ್ಮಲೆ ಪರಿಸರದ ನಾಗರಿಕರು ಮನವಿ ಮಾಡಿದ್ದಾರೆ.