ಬೆಂಗಳೂರು: ಬೆಂಗಳೂರು ನಗರದ ಕೆ ಜಿ. ಹಳ್ಳಿ ಮತ್ತು ಡಿ . ಜೆ. ಹಳ್ಳಿಯಲ್ಲಿ ನಡೆದ ಗಲಭೆ ಕುರಿತ ತನಿಖೆಗೆ ರಾಷ್ಟ್ರೀಯ ತನಿಖಾದಳ ಕೂಡ ಮುಂದಾಗಿದೆ. ಈ ಸಂಬಂಧ ಈಗಾಗಲೆ ತನಿಖೆ ನಡೆಸಿರುವ ಬೆಂಗಳೂರು ಪೊಲೀಸರಿಂದ ತನಿಖಾ ಸಂಸ್ಥೆ ಅಗತ್ಯ ಮಾಹಿತಿ ಕಲೆ ಹಾಕಿದೆ.
ಇದೀಗ ದೊರೆತಿರುವ ಮಾಹಿತಿಗಳನ್ನು ವಿಶ್ಲೇಷಿಸಿ ಮುಂದಿನ ತನಿಖಾ ಸ್ವರೂಪವನ್ನು ಎನ್ ಐ ಎ ನಿರ್ಧರಿಸಲಿದೆ. ಗಲಭೆಗೆ ನಿಜವಾದ ಕಾರಣ ಏನು, ಅದರ ಹಿಂದಿರುವ ಆರ್ಥಿಕ ಮೂಲ ಯಾವುದು ಎಂಬ ಕುರಿತು ಎನ್ ಐ ಎ ಗಮನ ಕೇಂದ್ರೀಕರಿಸಲಿದೆ.
ರಾಷ್ಟ್ರೀಯ ತನಿಖಾದಳ ಮುಖ್ಯವಾಗಿ ಭಯೋತ್ಪಾದನಾ ಚಟುವಟಿಕೆ ಕುರಿತ ಪ್ರಕರಣಗಳ ತನಿಖೆ ನಡೆಸುತ್ತಿದೆ. ಆರೋಪಿಗಳ ಸಂಪನ್ಮೂಲದ ಮೂಲದ ಬಗ್ಗೆ ಎನ್ ಐ ಎ ಗಮನ ಹರಿಸಲಿದೆ. ಬೆಂಗಳೂರಿನಲ್ಲಿ ಈ ಹಿಂದೆ ನಡೆದ ಬಾಂಬ್ ಸ್ಫೋಟಕ್ಕೆ ನೆರೆಯ ತಮಿಳುನಾಡು ಮತ್ತು ಕೇರಳದ ಜತೆ ಸಂಪರ್ಕ ಇದ್ದ ಅಂಶ ತನಿಖೆಯಲ್ಲಿ ಬಯಲಾಗಿತ್ತು. ಇದೀಗ ಹಿಂಸಾಚಾರದ ಕುರಿತು ಎಲ್ಲ ಆಯಾಮಗಳೊಂದಿಗೆ ತನಿಖೆ ನಡೆಸಲು ಎನ್ ಐ ಎ ಮುಂದಾಗಿದೆ.
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮೇಲೆ ದಾಳಿ ಹಾಗೂ ನಂತರದ ಬೆಳವಣಿಗೆಯ ಇಂಚು ಇಂಚು ಮಾಹಿತಿ ಎನ್ ಐ ಎ ಕಲೆ ಹಾಕಲಿದೆ.