







ಮಂಗಳೂರು: ಕೊಳತ್ತಮಜಲಿನ ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ಮತ್ತು ಹಲ್ಲೆಗೊಳಗಾಗಿ ಚೇತರಿಸಿಕೊಳ್ಳುತ್ತಿರುವ ಖಲಂದರ್ ಶಾಫಿ ಮನೆಗೆ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಬುಧವಾರ ಭೇಟಿ ನೀಡಿದರು.ಕೊಲೆಯಾದ ಅಬ್ದುಲ್ ರಹ್ಮಾನ್ ಅವರ ತಂದೆ ಮತ್ತು ತಾಯಿ ಮತ್ತು ಕುಟುಂಬಸ್ಥರನ್ನು ಭೇಟಿಯಾಗಿ ಅವರಿಗೆ ಸಾಂತ್ವನ ಹೇಳಿದರು. ಖಲಂದರ್ ಶಾಫಿ ಅವರನ್ನೂ ಭೇಟಿಯಾಗಿ ಅವರ ಚೇತರಿಕೆಯ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು ಅಬ್ದುಲ್ ರಹ್ಮಾನ್ ಕೊಲೆ ಮತ್ತು ಆತನ ಸ್ನೇಹಿತ ಕಲಂದರ್ ಶಾಫಿ ಮೇಲೆ ನಡೆದಿರುವ ಹಲ್ಲೆ ಘಟನೆಯು ಅತ್ಯಂತ ನೋವಿನ ವಿಚಾರವಾಗಿದೆ. ಇದು ದ.ಕ. ಜಿಲ್ಲೆಯ ಹಾಗೂ ಕರಾವಳಿಯ ವಿಶ್ವಾಸಭರಿತ ಮತ್ತು ಸೌಹಾರ್ದತೆಯ ಸಮಾಜಕ್ಕೆ ನೀಡಿದ ಪ್ರಬಲ ಕೊಡಲಿಯೇಟು ಆಗಿದೆ ಎಂದು ಹೇಳಿದರು.ಈ ಘಟನೆಯ ನಡೆಯುವ ನಡೆದ ಹೊತ್ತಿಗೆ ನಾನು ಊರಲ್ಲಿ ಇರಲಿಲ್ಲ. ಪವಿತ್ರ ಹಜ್ ಯಾತ್ರೆಗೆ ಹೋಗಿದ್ದೆ. ಈ ಕಾರಣದಿಂದಾಗಿ ಅಬ್ದುಲ್ ರಹಿಮಾನ್ ಮನೆಗೆ ಭೇಟಿ ನೀಡಲು ಈ ಮೊದಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.’ಒಬ್ಬನನ್ನು ವಿಶ್ವಾಸದಿಂದ ಕರೆದುಕೊಂಡು ಹೋಗಿ ಆತನಿಂದ ಕೆಲಸ ಮಾಡಿಸಿದ ಬಳಿಕ ಆತನಿಗೆ ಸೂಕ್ತ ವೇತನ ನೀಡಬೇಕಾಗಿರುವುದು ಕೆಲಸ ಮಾಡಿಸಿದರ ಧರ್ಮ. ಆದರೆ ಅಬ್ದುಲ್ ರಹ್ಮಾನ್ ನಿಂದ ಮನೆಗೆ ಹೊಯ್ದೆ ಹಾಕಿಸಿಕೊಂಡವರು ಆತನಿಗೆ ವೇತನ ಕೊಡದೆ ಅವನ ಪ್ರಾಣ ತೆಗೆದಿರುವುದು ಹೇಡಿತನದ ಕೃತ್ಯ ಇಂತಹ ಹೇಯ ಕೃತ್ಯವನ್ನು ಯಾವುದೇ ಧರ್ಮ, ನಾಗರಿಕ ಸಮಾಜ ಒಪ್ಪದು. ಇಂತಹ ವಿಶ್ವಾಸಘಾತಕ ಕೃತ್ಯವನ್ನು ಎಲ್ಲ ಸಮುದಾಯವರು ಖಂಡಿಸಿದ್ದಾರೆ ಎಂದರು.