ಬೆಂಗಳೂರು: ಪತ್ರಕರ್ತ, ನಿರೂಪಕ, ನಟ ಹಾಗೂ ಬಿಗ್ಬಾಸ್ನಲ್ಲೂ ಸ್ಪರ್ಧಿಸಿದ್ದ ಕಿರಿಕ್ ಕೀರ್ತಿ ಇಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಪತ್ನಿ ಅರ್ಪಿತಾ ಜತೆಗಿನ ವೈವಾಹಿಕ ಜೀವನ ಮಕ್ತಾಯಗೊಂಡಿರುವುನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆಯೇ ಕಿರಿಕ್ ಕೀರ್ತಿ ಮತ್ತು ಅರ್ಪಿತಾ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅದ್ಯಾವ ಮಟ್ಟಿಗೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಕೀರ್ತಿ ಬಂದಿದ್ದರಂತೆ.ಆಗ ಕೇಳಿ ಬಂದ ವದಂತಿಗೆ ಕೀರ್ತಿ ಪ್ರತಿಕ್ರಿಯೆ ನೀಡಿದ್ದರು. ಪ್ರೀತಿಸಿ ಮದುವೆಯಾದ ಈ ಜೋಡಿ ಇದೀಗ ವಿಚ್ಛೇದನ ನೀಡಿ ಪರಸ್ಪರ ದೂರವಾಗಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ ಕೀರ್ತಿ.
ಪೋಸ್ಟ್ ಆರಂಭದಲ್ಲಿ ಸಕಲರಿಗೂ ಸನ್ಮಂಗಳವಾಗಲಿ ಎಂದು ಬರೆದುಕೊಂಡು, ‘ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜೊತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ.. ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ’ ಎಂದು ಬರೆದುಕೊಂಡಿದ್ದಾರೆ ಕೀರ್ತಿ.
ಎರಡು ದಿನಗಳ ಹಿಂದೆ ನಾಡು, ದೇಶ, ಧರ್ಮ, ಭಾಷೆ, ಸಿದ್ಧಾಂತಗಳ ವಿಚಾರದಲ್ಲಿ ತಮ್ಮ ನಿಲುವನ್ನು ಪ್ರಕಟಿಸಿದ್ದ ಬೆನ್ನಿಗೇ ಅವರು ಇದೀಗ ವೈವಾಹಿಕ ಬದುಕಿನ ಕುರಿತ ನಿರ್ಣಯವನ್ನೂ ಪ್ರಕಟಿಸಿದ್ದಾರೆ. ನಾಡು, ನುಡಿ, ದೇಶ, ಧರ್ಮದ ಕುರಿತು ಮಾತನಾಡಿದ್ದಕ್ಕೆ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದ್ದಲ್ಲದೆ ತೇಜೋವಧೆಗಳಾಗಿದ್ದರ ಬಗ್ಗೆ ಅವರು ತೀವ್ರ ಅಸಮಾಧಾನ ಹೊರಹಾಕಿದ್ದರು. ತನ್ನನ್ನು ಸೈದ್ಧಾಂತಿಕವಾಗಿ, ವೈಚಾರಿಕವಾಗಿ ವಿರೋಧಿಸುವವರು ತನ್ನ ಕುಟುಂಬಸ್ಥರನ್ನು ಉದ್ದೇಶಿಸಿ ಅವಹೇಳನಕಾರಿ ಆಗಿ ಮಾತನಾಡುತ್ತಿದ್ದುದರ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ನನ್ನ ಕುಟುಂಬಸ್ಥರ ಹಿತದ ದೃಷ್ಟಿಯಿಂದ ಇನ್ನು ನನ್ನ ಸಿದ್ಧಾಂತ, ನಾಡು-ನುಡಿ, ದೇಶ-ಧರ್ಮದ ಮೇಲಿನ ಅಭಿಮಾನ ಮನಸ್ಸಿನಲ್ಲಿ ಮಾತ್ರ ಇರಲಿದೆ, ಆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂಬ ನಿರ್ಧಾರ ಎರಡು ದಿನಗಳ ಹಿಂದೆ ಪ್ರಕಟಿಸಿದ್ದರು.