ಕೇರಳದ ಕೊಲ್ಲಂನ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯೆಯೊಬ್ಬರನ್ನು ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಯೋರ್ವ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ವರದಿ ಆಗಿದೆ. ಕೊಟ್ಟಾರಕ್ಕರ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ.
ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಂದನಾ ದಾಸ್ (23) ಎಂಬ ವೈದ್ಯೆಯ ಎದೆ ಮತ್ತು ಕತ್ತಿನ ಮೇಲೆ ಆರೋಪಿ ಅನೇಕ ಬಾರಿ ಇರಿದಿದ್ದಾನೆ. ಗಂಭೀರ ಗಾಯಗೊಂಡ ವಂದನಾ ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಸಾವಿಗೀಡಾಗಿದ್ದಾರೆ.
42ರ ಹರೆಯದ ಆರೋಪಿ ಎಸ್ ಸಂದೀಪ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ. ಈತ ಪೊಲೀಸರು ಸೇರಿದಂತೆ ಆಸ್ಪತ್ರೆಯಲ್ಲಿ ಇತರ ನಾಲ್ವರ ಮೇಲೆ ಹಲ್ಲೆ ನಡೆಸಿದ್ದಾನೆ. ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಈತನನ್ನು ಆಸ್ಪತ್ರೆಗೆ ಕರೆತಂದಿದ್ದರು. ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ ಸಂದೀಪ್ ಸಿಟ್ಟುಗೊಂಡು ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ನಂತರ ಆತನನ್ನು ಮನೆಯಿಂದ ಬಂಧಿಸಲಾಯಿತು. ಸಂದೀಪ್ ಅವರ ಹಿಂಸಾತ್ಮಕ ವರ್ತನೆಯ ಬಗ್ಗೆ ಅವರ ಕುಟುಂಬ ಸದಸ್ಯರು ದೂರು ನೀಡಿದ್ದರು.
ಸಂದೀಪ್ ಕಾಲಿಗೆ ಸಣ್ಣ ಗಾಯವಾಗಿದ್ದರಿಂದ, ಪೊಲೀಸ್ ತಂಡವು ಅವರನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ದಿತ್ತು. ಅಲ್ಲಿ ಆತ ಯಾವುದೇ ಪ್ರಚೋದನೆಯಿಲ್ಲದೆ ಹಲ್ಲೆ ನಡೆಸಿದ್ದಾನೆ. ಸಂದೀಪ್ ಗಾಯಕ್ಕೆ ಚಿಕಿತ್ಸೆ ನೀಡುತ್ತಿರುವಾಗ ಆತ ಆಸ್ಪತ್ರೆಯ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಶಸ್ತ್ರಚಿಕಿತ್ಸೆಯ ಕತ್ತರಿಯನ್ನು ಕೈಗೆತ್ತಿಕೊಂಡಿದ್ದಾನೆ. ಈ ಕತ್ತರಿಯಿಂದ ಆತ ವೈದ್ಯೆ ವಂದನಾಳ ಎದೆಗೆ ಮತ್ತು ಕುತ್ತಿಗೆಗೆ ಪದೇ ಪದೇ ಇರಿದಿದ್ದಲ್ಲದೆ ಆಸ್ಪತ್ರೆಗೆ ಕರೆದೊಯ್ದ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾನೆ.