ಕೊಡಗು: ಗಂಡ-ಹೆಂಡತಿ ನಡುವಿನ ಜಗಳ ತಾರಕಕ್ಕೇರಿದ ಪರಿಣಾಮ ಕುಡಿತದ ಅಮಲಿನಲ್ಲಿ ಕೊಡಗಿನ ವ್ಯಕ್ತಿಯೊಬ್ಬ ತನ್ನ ಮನೆಗೇ ಬೆಂಕಿ ಹಚ್ಚಿದ್ದಾನೆ. ಕೊಡಗಿನ ಪೊನ್ನಂಪೇಟೆಯಲ್ಲಿ ನಿನ್ನೆ ರಾತ್ರಿ ಈ ದುರ್ಘಟನೆ ನಡೆದಿದೆ. ಈ ದುರಂತದಲ್ಲಿ ಮಗು ಸೇರಿ 6 ಜನರು ಸಜೀವ ದಹನವಾಗಿದ್ದಾರೆ. ಬೆಂಕಿ ಹಚ್ಚಿ, ಹೆಂಡತಿ, ಮಕ್ಕಳನ್ನು ಕೊಂದ ಕುಡುಕ ಪರಾರಿಯಾಗಿದ್ದಾನೆ.
ಪೊನ್ನಂಪೇಟೆಯ ಮುಗುಟಗೇರಿಯ ಭೋಜ ಎಂಬಾತ ದಿನವೂ ಕುಡಿದು ಮನೆಗೆ ಬರುತ್ತಿದ್ದ. ನಿನ್ನೆ ರಾತ್ರಿ ಆತ ಮನೆಗೆ ಬಂದಾಗ ಆತನ ಹೆಂಡತಿ ಬೇಬಿ ತನ್ನ ತಮ್ಮನ ಮನೆಗೆ ಹೋಗಿದ್ದಳು. ಆಕೆಯನ್ನು ಎಷ್ಟು ಕರೆದರೂ ಬರದಿದ್ದರಿಂದ ಕೋಪಗೊಂಡ ಭೋಜ ನಂತರ ಅದೇ ವಿಷಯಕ್ಕೆ ಆಕೆಯೊಂದಿಗೆ ಜಗಳವಾಡಿದ್ದ. ತಾಲೂಕಿನ ಕಾನೂರು ಗ್ರಾಮದಲ್ಲಿ ನಡೆದಿದೆ.
ಈ ಜಗಳ ತಾರಕಕ್ಕೇರಿದ್ದರಿಂದ ಕೋಪದಿಂದ ಭೋಜ ಮನೆಯಿಂದ ರಾತ್ರಿಯೇ ಹೊರಗೆ ಹೋಗಿದ್ದ. ಹಾಗೆ ಹೊರಹೋದವನು ಮನೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಿಕೊಂಡು ಹೋಗಿ, ತನ್ನದೇ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದರಿಂದ ಮನೆಯೊಳಗಿದ್ದ ಆತನ ಹೆಂಡತಿ, ಮಕ್ಕಳು ಸೇರಿದಂತೆ ಒಟ್ಟು 6 ಜನರು ಹೊರಗೆ ಬರಲಾರದೆ ಬೆಂಕಿಯಿಂದ ಸುಟ್ಟುಹೋಗಿದ್ದಾರೆ.
ಅಕ್ಕಪಕ್ಕದ ಮನೆಯವರು ಬಂದು ಬಾಗಿಲು ಒಡೆದು, ಒಳಗೆ ಹೋಗುವಷ್ಟರಲ್ಲಿ ಎಲ್ಲರೂ ಅರೆಬರೆ ಸುಟ್ಟುಹೋಗಿದ್ದರು. ಅವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಮೂವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಮೈ ಬಹುತೇಕ ಭಾಗ ಸುಟ್ಟುಹೋಗಿದ್ದರಿಂದ ಇಂದು ಆ ಮೂವರು ಕೂಡ ಸಾವನ್ನಪ್ಪಿದ್ದಾರೆ.