ಕೊಲ್ಕತ್ತಾ : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಿಜೆಪಿ ಸೇರುತ್ತಾರಾ? ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೇ ? ಇಂಥದೊಂದು ಸುದ್ದಿ ಬಿಜೆಪಿ ವಲಯದಿಂದ ಹರಿದಾಡಲಾರಂಭಿಸಿದೆ. ಆದರೆ ಅಧಿಕೃತವಾಗಿ ತಿಳಿದು ಬಂದಿಲ್ಲ.
ಮಾರ್ಚ್ 7 ರಂದು ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಪ್ರಧಾನಿ ಮೋದಿ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹುದ್ದೆಗೆ ಸೌರವ್ ಗಂಗೂಲಿ ಅವರ ಹೆಸರನ್ನುರ್ಯಾಲಿಯಲ್ಲಿ ಘೋಷಿಸಲಿದ್ದಾರೆ ಎನ್ನಲಾಗಿದೆ. ಆದರೆ ಬಿಜೆಪಿ ಇದನ್ನು ಇಷ್ಟರವರೆಗೆ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.
ಗಂಗೂಲಿ ಬಿಜೆಪಿ ಸೇರುತ್ತಾರೆ, ಮುಖ್ಯಮಂತ್ರಿ ಪದವಿಯ ಅಭ್ಯರ್ಥಿಯಾಗುತ್ತಾರೆ ಎನ್ನುವ ಸುದ್ದಿಯೇನೋ ಹರಿದಾಡುತ್ತಿದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಅವರ ಆರೋಗ್ಯ ಸ್ಥಿತಿ. ಇತ್ತೀಚೆಗೆ ಅವರು ಹೃದಾಯಾಘಾತಕ್ಕೆ ಒಳಗಾಗಿ ಆಂಜಿಯೋಪ್ಲ್ಯಾಸ್ಟ್ ಮಾಡಿಸಿಕೊಂಡಿದ್ದರು. ಇದಾದ ನಂತರ ಮತ್ತೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಗೊಂಡಿದ್ದರು.
ಎರಡನೇ ಬಾರಿ ದಾಖಲಾದ ಅವರಿಗೆ ಮತ್ತೆರಡು ಸ್ಟೆಂಟ್ ಹಾಕಲಾಗಿದೆ. ಇದಾದ ಬಳಿಕ ಸೌರವ್ ಗಂಗೂಲಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ರೆಸ್ಟ್ ಅಗತ್ಯವಿದೆ. ರಾಜಕೀಯ ಸೇರಿದರೆ ಓಡಾಟ ಮಾಡಬೇಕಾಗುತ್ತದೆ. ಅದರಲ್ಲೂ ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ತಲೆ ಮೇಲೆ ಇನ್ನಷ್ಟು ಜವಾಬ್ದಾರಿ ಬರುತ್ತದೆ. ತಾನು ಗೆಲ್ಲುವುದಲ್ಲದೆ ಇಡೀ ರಾಜ್ಯದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ಹೆಗಲ ಮೇಲಿರುತ್ತದೆ. ಇದಕ್ಕೆಲ್ಲ ಗಂಗೂಲಿ ಕುಟುಂಬ ಒಪ್ಪಿಕೊಳ್ಳುತ್ತದೆಯೇ ಎನ್ನುವುದು ಬಲು ದೊಡ್ಡ ಪ್ರಶ್ನೆ. ಇದಲ್ಲದೆ ಪಶ್ಚಿಮ ಬಂಗಾಳದ ಬಿಜೆಪಿ ರ್ಯಾಲಿಯಲ್ಲಿ ಪ್ರಧಾನಿ ಭಾಗವಹಿಸುವ ಬಗ್ಗೆ ಕೂಡ ಸಂದೇಹವಿದೆ.